ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ನಿವೃತ್ತಿ; ನ್ಯಾ. ಅಕಿಲ್ ಕುರೇಶಿ ಕಾರ್ಯಗಳ ಶ್ಲಾಘನೆ

ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ನಿವೃತ್ತಿ: ನ್ಯಾ. ಅಕಿಲ್ ಕುರೇಶಿ ಕಾರ್ಯಗಳ ಶ್ಲಾಘನೆ
Chief Justice S Muralidhar
Chief Justice S Muralidhar

ಒಡಿಶಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಾ. ಎಸ್‌ ಮುರಳೀಧರ್ ಅವರು ಸೋಮವಾರ ನಿವೃತ್ತರಾದರು.

ಅದೇ ದಿನ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನ್ಯಾಯಮೂರ್ತಿಯಾಗಿ ತಮ್ಮ 17 ವರ್ಷಗಳ ಪ್ರಯಾಣದಲ್ಲಿ ಬೆಂಬಲವಾಗಿ ನಿಂತ ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸಿದರುಈ

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜಸ್ಥಾನ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಕಿಲ್‌ ಕುರೇಶಿ ಅವರ ಕಾರ್ಯಗಳನ್ನು ನ್ಯಾ. ಮುರಳೀಧರ್‌ ನೆನೆದರು.

“ಅತ್ಯುತ್ತಮ ಸ್ಫೂರ್ತಿಯ ಸೆಲೆಯಾಗಿರುವ ಕೆಲ ಮಾಜಿ ಸಹೋದ್ಯೋಗಿಗಳನ್ನು ನಾನಿಲ್ಲಿ ನೆನೆಯಬೇಕು. ಅವರಲ್ಲಿ ಒಬ್ಬರು ನನ್ನ ಮಾಜಿ ಸಹೋದ್ಯೋಗಿಯಲ್ಲ ಸ್ಫೂರ್ತಿಯ ಮಹಾನ್‌ ಸೆಲೆಯಾದ ರಾಜಸ್ಥಾನ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಕಿಲ್ ಕುರೇಶಿ ನನ್ನೆದುರು ಕುಳಿತಿದ್ದಾರೆ”ಎಂದರು.

Also Read
ನ್ಯಾಯಾಂಗ ನಿಂದನೆ: ಅಗ್ನಿಹೋತ್ರಿ, ರಂಗನಾಥನ್‌, ಸ್ವರಾಜ್ಯ ವಿರುದ್ಧ ಏಕಪಕ್ಷೀಯ ಆದೇಶ ಮಾಡಿದ ದೆಹಲಿ ಹೈಕೋರ್ಟ್‌

ಗಮನಾರ್ಹವಾಗಿ, ಮುಖ್ಯ ನ್ಯಾಯಮೂರ್ತಿಗಳಾದ ಮುರಳೀಧರ್ ಮತ್ತು ಕುರೇಶಿ ಅವರ ನಿಯುಕ್ತಿ ಮತ್ತು ವರ್ಗಾವಣೆ ವಿವಾದಕ್ಕೆ ಕಾರಣವಾಗಿದ್ದವು.

ದೆಹಲಿ ಗಲಭೆಗಳ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವ ಬಗ್ಗೆ ವಿವಾದಾತ್ಮಕ ಅಭಿಪ್ರಾಯವ್ಯಕ್ತಪಡಿಸಿದ ಕೆಲ ದಿನಗಳಲ್ಲೇ ನ್ಯಾ. ಮುರಳೀಧರ್‌ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

Also Read
ನ್ಯಾಯಾಂಗ ನಿಂದನೆ ಪ್ರಕರಣದಿಂದ ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಮುಕ್ತಗೊಳಿಸಿದ ದೆಹಲಿ ಹೈಕೋರ್ಟ್

ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರ, ಅಂತಿಮವಾಗಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಲಾಗಿತ್ತು. ಆದರೆ, ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ಕೊಲಿಜಿಯಂ ಪ್ರಸ್ತಾವನೆಯನ್ನು ಹಿಂಪಡೆದಿತ್ತು.

ಈ ಮಧ್ಯೆ, ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಅಕಿಲ್ ಕುರೇಶಿ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ನಿವೃತ್ತರಾದರು. ಈ ಇಬ್ಬರನ್ನೂ ವರ್ಗಾವಣೆ ಮಾಡಿದ ಬಗ್ಗೆ ಇಲ್ಲವೇ ಅವರ ಪದೋನ್ನತಿಯನ್ನು ಕೊಲಿಜಿಯಂ ತಡೆದ ಬಗ್ಗೆ ವಕೀಲರ ಕೆಲ ವರ್ಗದಿಂದ ಅಪಸ್ವರ ಕೇಳಿಬಂದಿತ್ತು.

Also Read
ಹೋರಾಟಗಳಿಂದ ರೂಪುಗೊಂಡ ಕಾನೂನಿನ ಸಮರ್ಪಕ ಅನುಷ್ಠಾನದಿಂದ ಸಾಮಾಜಿಕ ಸುಧಾರಣೆ ಸಾಧ್ಯ: ನ್ಯಾ. ಮುರಳೀಧರ್‌

ನ್ಯಾ. ಮುರಳೀಧರ್‌ ಅವರು ನೀಡಿದ ಪ್ರಮುಖ ತೀರ್ಪುಗಳು

  • ಪ್ರಕರಣ: ನಾಜ್‌ ಪ್ರತಿಷ್ಠಾನ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ
    ತೀರ್ಪು: ಸಲಿಂಗ ಕಾಮ ಅಪರಾಧವಲ್ಲ

  • ಪ್ರಕರಣ: ಗೌತಮ್‌ ನವಲಖಾ ಮತ್ತು ಸರ್ಕಾರ ನಡುವಣ ಪ್ರಕರಣ
    ತೀರ್ಪು:  ನಕ್ಸಲ್‌ ನಂಟು ಆರೋಪ ಎದುರಿಸುತ್ತಿದ್ದ ಬುದ್ಧಿಜೀವಿಗಳು ಮತ್ತು ಸಾಮಾಜಿಕ ಹೋರಾಟಗಾರರಿಗೆ ಜಾಮೀನು  

  • ಪ್ರಕರಣ:  ಸಿಬಿಐ ಮತ್ತು ಸಜ್ಜನ್‌ ಕುಮಾರ್‌ ನಡುವಣ ಪ್ರಕರಣ
    ತೀರ್ಪು:  1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ದೋಷಿ ಎಂದು ಘೋಷಣೆ.

  • ಪ್ರಕರಣ: ಡಾ. ಪುನೀತಾ ಕೆ ಸೋಧಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ
    ತೀರ್ಪು: ಉದ್ಯೋಗ ಸ್ಥಳದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕಿರುಕುಳದ ಮಿತಿ ಹೆಚ್ಚಳ

  • ಪ್ರಕರಣ: ಡಾ. ಸಂಘಮಿತ್ರ ಆಚಾರ್ಯ ಮತ್ತಿತರರು ಹಾಗೂ ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ
    ತೀರ್ಪು: ಅವಿವಾಹಿತ ವಯಸ್ಕ ಮಹಿಳೆಗೆ ಇರುವ ಹಕ್ಕುಗಳ ವಿವರಣೆ

  • ಪ್ರಕರಣ: ಲಕ್ಷ್ಮೀ ಮಂಡಲ್‌ ಮತ್ತು ದೀನ್‌ ದಯಾಳ್‌ ಹರಿನಗರ್‌ ಆಸ್ಪತ್ರೆ ಇನ್ನಿತರರ ನಡುವಣ ಪ್ರಕರಣ
    ತೀರ್ಪು: ಸಾಂವಿಧಾನಿಕ ಹಕ್ಕುಗಳಡಿ ತಾಯಿಯ ಆರೋಗ್ಯ ಸೇವೆ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ಯಾವುದೇ ಗರ್ಭಿಣಿಯ ಸಮಾಜೋಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು.

Related Stories

No stories found.
Kannada Bar & Bench
kannada.barandbench.com