

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧಿತರಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್ ರನ್ಯಾ ರಾವ್, ತರುಣ್ ಕೊಂಡೂರು ರಾಜು ಮತ್ತು ಸಾಹಿಲ್ ಜೈನ್ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆಯ (ಕಾಫಿಪೋಸಾ) ಅಡಿ ಬಂಧಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಎತ್ತಿ ಹಿಡಿದಿದೆ. ಇದರಿಂದ ರನ್ಯಾ ಮತ್ತು ಇತರೆ ಆರೋಪಿಗಳು ಜೈಲಿನಲ್ಲೇ ದಿನ ಕಳೆಯಬೇಕಿದೆ.
ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಡಿಸೆಂಬರ್ 1ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ವಿಭಾಗೀಯ ಪೀಠ ಇಂದು ಪ್ರಕಟಿಸಿತು.
ರನ್ಯಾ ಮಲತಾಯಿ ಎಚ್ ಎಸ್ ರೋಹಿಣಿ ಮತ್ತು ತರುಣ್ ತಾಯಿ ರಮಾ ರಾಜು ಮತ್ತು ಸಾಹಿಲ್ ಜೈನ್ ತಾಯಿ ಪ್ರಿಯಾಂಕಾ ಸರ್ಕಾರಿಯಾ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದು, ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ವಿಚಾರಣೆಯ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ರನ್ಯಾಗೆ ಪೆನ್ಡ್ರೈವ್ ತಲುಪಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ. ಆಕೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದರಿಂದ ಜೈಲು ಕೈಪಿಡಿಯ ಪ್ರಕಾರ ಡಿಜಿಟಲ್ ಸಾಧನವಾದ ಪೆನ್ಡ್ರೈವ್ ಅವರಿಗೆ ನೀಡಲಾಗಿಲ್ಲ. ಬದಲಿಗೆ ಅವರು ಸೂಚಿಸಿದಂತೆ ಅವರ ವಕೀಲ ಶಾಶ್ವತ್ ಅವರಿಗೆ ನೀಡಲು ಪ್ರಯತ್ನಿಸಲಾಗಿತ್ತು. ಇದನ್ನು ಶಾಶ್ವತ್ ಸ್ವೀಕರಿಸದೇ ಇದ್ದುದರಿಂದ ಅಂತಿಮವಾಗಿ ರನ್ಯಾ ಸೂಚನೆಯ ಮೇರೆಗೆ ಅವರ ಮಲತಾಯಿ ರೋಹಿಣಿ ಅವರಿಗೆ ನೀಡಲಾಗಿದೆ. ಚಿನ್ನ ಕಳ್ಳ ಸಾಗಣೆಯಂಥ ಕೃತ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಅವರನ್ನು ಬಿಡುಗಡೆ ಮಾಡಬಾರದು. ಕನ್ನಡದಲ್ಲಿ ನೀಡಲಾಗಿರುವ ದಾಖಲೆಗಳನ್ನು ತಪ್ಪಾಗಿ ನೀಡಲಾಗಿದ್ದು, ಅದರಿಂದ ಅವರಿಗೆ ಯಾವುದೇ ಅನುಕೂಲವಿಲ್ಲ. ಇನ್ನು ಅಪೂರ್ಣವಾದ ದಾಖಲೆ ಎಂದು ವಾದಿಸುತ್ತಿರುವುದು ಸಮಂಜಸವಲ್ಲ. ಇದೆಲ್ಲವೂ ನ್ಯಾಯಾಲಯದ ಮುಂದೆ ಇದೆ. ಒಟ್ಟಾರೆಯಾಗಿ ನಿಯಮಾನುಸಾರವೇ ಎಲ್ಲರನ್ನೂ ಕಾಫಿಫೋಸಾ ಅಡಿ ವಶಕ್ಕೆ ಪಡೆಯಲಾಗಿದೆ” ಎಂದು ಸಮರ್ಥಿಸಿದ್ದರು.
ರನ್ಯಾ ಪರವಾಗಿ ವಕೀಲ ಕೆ ಚಂದ್ರಶೇಖರ ಅವರು ವಕಾಲತ್ತು ವಹಿಸಿದ್ದು, ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಕಿರಣ್ ಜವಳಿ ಅವರು “ಬಂಧನ ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಡಿಆರ್ಐ ಪೆನ್ಡ್ರೈವ್ (ರನ್ಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಿನ ವಿಡಿಯೊ ದಾಖಲೆ) ಆಧರಿಸಿದೆ. ಆದರೆ, ಅದನ್ನು ರನ್ಯಾ ಅವರಿಗೆ ಒದಗಿಸಲಾಗಿಲ್ಲ. ರನ್ಯಾ ಅವರನ್ನು ವಶಕ್ಕೆ ಪಡೆದಾಗಲೇ ಪಾಸ್ಪೋರ್ಟ್ ಜಫ್ತಿ ಮಾಡಿದ್ದು, ಅದು ಸದ್ಯ ವಿಶೇಷ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಹೀಗಿರುವಾಗ ರನ್ಯಾ ದೇಶ ತೊರೆಯುವ ಸಂದರ್ಭ ನಿರ್ಮಾಣವಾಗುವುದಿಲ್ಲ” ಎಂದಿದ್ದರು.
ಮುಂದುವರಿದು, “ಆರೋಪಿಗೆ ತಿಳಿಯುವ ಭಾಷೆಯಲ್ಲಿ ದಾಖಲೆಗಳನ್ನು ಒದಗಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ರನ್ಯಾಗೆ ಕನ್ನಡದಲ್ಲಿ ಮುದ್ರಿಸಿರುವ ಎರಡು ಪುಟಗಳ ದಾಖಲೆಯನ್ನು ನೀಡಲಾಗಿದೆ. ಅದನ್ನು ಅವರಿಗೆ ಓದಲು ಬಂದಿಲ್ಲ. ಇನ್ನು ಅಪೂರ್ಣವಾದ ದಾಖಲೆಯ ನಕಲನ್ನು ಒದಗಿಸಲಾಗಿದೆ. ರನ್ಯಾಗೆ ಸಂವಿಧಾನದ 22(5)ನೇ ವಿಧಿಯಡಿ ಸಕ್ಷಮ ಪ್ರಾಧಿಕಾರಕ್ಕೆ ಸಮರ್ಥವಾದ ರೀತಿಯಲ್ಲಿ ಮನವಿ ಸಲ್ಲಿಸಲು ಅಸಾಧ್ಯವಾಗಿಸಲಾಗಿದೆ” ಎಂದಿದ್ದರು.
ತರುಣ್ ರಾಜು ಪರವಾಗಿ ವಾದಿಸಿದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಕಾಫಿಪೋಸಾ ಅಡಿ ಬಂಧನವೇ ಅಕ್ರಮ ಎಂದು ಘೋಷಸಿಬೇಕು ಎಂದು ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಗೆ ಎರಡು ಬಾರಿ ಮನವಿ ಸಲ್ಲಿಸಿಲಾಗಿದೆ. ಆದರೆ, ಕೇಂದ್ರವು ಅದನ್ನು ಹೈಕೋರ್ಟ್ನ ಸಲಹಾ ಸಮಿತಿಗೆ ರವಾನಿಸಿ ಕೈಬಿಟ್ಟಿದೆ. ಇಲ್ಲಿ ಜಂಟಿ ಕಾರ್ಯದರ್ಶಿಯು ಪೋಸ್ಟ್ ಮ್ಯಾನ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ತರುಣ್ ರಾಜು ಅವರು ದುಬೈನಲ್ಲಿ ರನ್ಯಾ ಜೊತೆ ವ್ಯವಹರಿಸಿದ್ದು, ಅಲ್ಲಿ ಮಾಡಿರುವ ಕೆಲಸಕ್ಕೆ ಅವರನ್ನು ಭಾರತದಲ್ಲಿ ಹೊಣೆ ಮಾಡಲಾಗದು” ಎಂದಿದ್ದರು.
ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಯು ಏಪ್ರಿಲ್ 22ರಂದು ಕಾಫಿಫೋಸಾ ಅಡಿ ರನ್ಯಾ, ತರುಣ್ ರಾಜು ಮತ್ತು ಸಾಹೀಲ್ ಜೈನ್ ಅವರನ್ನು ಡಿಆರ್ಐ ವಶಕ್ಕೆ ಪಡೆದಿದ್ದರು. ಇದನ್ನು ಅಕ್ರಮ ಎಂದು ಘೋಷಿಸಬೇಕು ಎಂದು ರನ್ಯಾ ಹಾಗೂ ತರುಣ್ ಅವರು ಮನವಿ ಸಲ್ಲಿಸಿದ್ದರು. ಈ ಮನವಿಗಳನ್ನು 19.6.2025ರಂದು ನಡೆದ ಸಲಹಾ ಮಂಡಳಿ ಸಭೆಯಲ್ಲಿ ಮಂಡಿಸಲಾಗಿತ್ತು. ಸಭೆಯಲ್ಲಿ ಚರ್ಚಿಸಿ, ಸಲಹಾ ಮಂಡಳಿಯು 2.7.2025ರಂದು ವರದಿ ನೀಡಿತ್ತು. 16.7.2025ರಂದು ಖಾತರಿಪಡಿಸಿ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.
ಪ್ರಕರಣದ ಹಿನ್ನೆಲೆ: ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿತ್ತು.