ಶೌಚಗುಂಡಿ ಸ್ವಚ್ಛತೆಗೆ ಸಂಬಂಧಿಸಿದ ಕಾಯಿದೆ ಜಾರಿಗೆ ಬಂದೇ ಇಲ್ಲ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಶೌಚಗುಂಡಿಗಿಳಿದು ಸಾವನ್ನಪ್ಪುವ ಕಾರ್ಮಿಕರಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಇದುವರೆಗೆ ಒಂದೇ ಒಂದು ಪ್ರಕರಣವನ್ನೂ ದಾಖಲಿಸಿಲ್ಲ ಎಂದು ಅರ್ಜಿಯೊಂದರಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
Manual Scavenging, protest
Manual Scavenging, protest

ರಾಜ್ಯದಲ್ಲಿ ಮಲ ಹೊರುವ ಪದ್ದತಿ ನಿಷೇಧಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ. ಎರಡು ವಾರಗಳ ಬಳಿಕ ಆದೇಶ ನೀಡಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ರಾಜ್ಯದಲ್ಲಿ ಮಲಹೊರುವ ಪದ್ದತಿ ನಿಷೇಧಿಸುವಂತೆ ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೊದಲ ಅರ್ಜಿಯನ್ನು ವಕೀಲ ಕ್ಲಿಫ್ಟನ್ ಡಿ ರೋಜಾರಿಯೊ ಅವರ ಮೂಲಕ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಸಲ್ಲಿಸಿದೆ. ಎರಡನೇ ಅರ್ಜಿ ಸಲ್ಲಿಸಿರುವ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲೆ ಜಯ್ನಾ ಕೊಠಾರಿ ವಾದಿಸುತ್ತಿದ್ದಾರೆ.

Also Read
ಎಫ್ಐಆರ್ ವಿಶ್ವಕೋಶವಾಗಿರಬೇಕಿಲ್ಲ, ಅಪರಾಧದ ವರದಿ ಮಾತ್ರ ಅಗತ್ಯ: ಕರ್ನಾಟಕ ಹೈಕೋರ್ಟ್

ರಾಜ್ಯದಲ್ಲಿ ಒಂಬತ್ತು ವಿಧದ ಮಲಹೊರುವ ಪದ್ಧತಿ ಇರುವ ಬಗ್ಗೆ ರೊಜಾರಿಯೊ ಅವರು ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ರಾಜ್ಯದಲ್ಲಿ ಶೌಚಗುಂಡಿ ಸ್ವಚ್ಛತೆ ವೇಳೆ ಉಂಟಾಗುವ ಪ್ರಾಣಹಾನಿ ಅಸ್ವಸ್ಥತೆ ಕುರಿತಂತೆ ಇದುವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ವಾದಿಸಿದ್ದರು. ಅಲ್ಲದೆ ಶೌಚಗುಂಡಿ ಸ್ವಚ್ಛತೆಗೆ ತೊಡಗುವ ಹೆಚ್ಚಿನ ಮಂದಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್‌ಸಿ / ಎಸ್‌ಟಿ) ಸಮುದಾಯಕ್ಕೆ ಸೇರಿದವರು ಎಂದ ಅವರು ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರ ರಾಜ್ಯಮಟ್ಟದ ಸಮಗ್ರ ಪಟ್ಟಿಯೊಂದನ್ನು ರೂಪಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.

ಶೌಚಗುಂಡಿ ಕಾರ್ಮಿಕರ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯಿದೆಯ ಕುರಿತಂತೆ ಜಯ್ನಾ ಕೊಠಾರಿ ಗಮನ ಸೆಳೆದರು. ರಾಜ್ಯ ಸರ್ಕಾರ ಸಲ್ಲಿಸಿದ ಆಕ್ಷೇಪಣೆಗಳನ್ನು ಗಮನಿಸಿದ ನ್ಯಾಯಾಲಯ ʼಕಾಯಿದೆ ಯಾವುದೇ ರೀತಿಯಲ್ಲಿ ಜಾರಿಗೆ ಬಂದೇ ಇಲ್ಲ ಪ್ರಕರಣದ ಎಲ್ಲಾ ಪಕ್ಷಗಳು ಕಾಯಿದೆ ಜಾರಿಯ ಪರ ನಿಲ್ಲಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟಿತು.

Also Read
ಪುನರ್ವಸತಿ ಯೋಜನೆ ವೈಫಲ್ಯಕ್ಕೆ ಕೊರೊನಾ ನೆಪ ಹೇಳುವಂತಿಲ್ಲ: ಕರ್ನಾಟಕ ಹೈಕೋರ್ಟ್ ಸಿಡಿಮಿಡಿ

ಎಐಸಿಸಿಟಿಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ರಾಜ್ಯದಾದ್ಯಂತ ಜಾರಿಯಲ್ಲಿರುವ ಅಮಾನವೀಯ ಮಲಹೊರುವ ಪದ್ದತಿಯಿಂದಾಗಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದು ವ್ಯಕ್ತಿಯು ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕಿಗೆ ಧಕ್ಕೆ ತರುತ್ತದೆ. ಅಲ್ಲದೆ ಇದು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಶೌಚಗುಂಡಿ ವೃತ್ತಿಯ ಇತಿಹಾಸದ ಬಗ್ಗೆಯೂ ಬೆಳಕು ಚೆಲ್ಲಿರುವ ಅರ್ಜಿ, ʼಇದು ರೈಲ್ವೆ, ಸೇನಾ ವಲಯ ಹಾಗೂ ಕೆಲ ಧಾರ್ಮಿಕ ಹಬ್ಬಗಳ ಮೂಲಕ ವಿಕಸನಗೊಂಡು ಸಾಂಸ್ಥೀಕರಣಗೊಂಡಿದೆ ಎಂದು ತಿಳಿಸಿದೆ. ಅಲ್ಲದೆ, “ಶೌಚಗುಂಡಿ ಸ್ವಚ್ಛಗೊಳಿಸುವ ಕಾರ್ಮಿಕರನ್ನು ಗುರುತಿಸುವಲ್ಲಿ ಸಂಬಂಧಪಟ್ಟವರು ಎಡವಿದ್ದಾರೆ. ಅಂತಹ ಕಾರ್ಮಿಕರ ಗುರುತಿಸುವಿಕೆ ಮತ್ತು ಎಣಿಕೆ ಪ್ರಕ್ರಿಯೆ ಮಾತ್ರವಲ್ಲದೆ ಪುನರ್ವಸತಿ ಮತ್ತು ನೆರವಿನ ಹಂತದಲ್ಲಿಯೂ ದೋಷ ಕಂಡುಬರುತ್ತದೆ. ಜೊತೆಗೆ ಅಪರಾಧ ಹೇಗೆ ನಡೆಯಿತು ಎಂಬ ತೀರ್ಮಾನಕ್ಕೆ ಬರಲು ಆರೋಪಿಗಳ ವಿಚಾರಣೆ ನಡೆಸುವಲ್ಲಿಯೂ ವಿಫಲತೆ” ಕಂಡುಬರುತ್ತಿದೆ” ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com