
ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿಐಪಿ ಗ್ಯಾಲರಿ ಕುಸಿದು ತೃಕ್ಕಕ್ಕರ ವಿಧಾನಸಭಾ ಕ್ಷೇತ್ರದ ಉಮಾ ಥಾಮಸ್ ಗಂಭೀರ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯೊಳಗೆ (ಜನವರಿ 2) ಪೊಲೀಸರೆದುರು ಶರಣಾಗುವಂತೆ ಕಾರ್ಯಕ್ರಮದ ಸಂಘಟಕರಾಗಿರುವ ಆರೋಪಿಗಳಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ [ನಿಗೋಷ್ಕುಮಾರ್ ಎಂ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಬಿಎನ್ಎಸ್ ಸೆಕ್ಷನ್ 110ರ ಅಡಿ ಆರೋಪಿಗಳ ಅಪರಾಧ ಜಾಮೀನು ರಹಿತ ಸ್ವರೂಪದ್ದಾಗಿದೆ ಎಂಬುದನ್ನು ಹೇಳುವ ತನಿಖಾಧಿಕಾರಿಗಳ ಅಫಿಡವಿಟ್ ಪರಿಗಣಿಸಿದ ನ್ಯಾಯಾಲಯ ನಾಳೆ ಮಧ್ಯಾಹ್ನ 2 ಗಂಟೆಗೂ ಮುನ್ನ ಆರೋಪಿಗಳು ಪೊಲೀಸರೆದುರು ಶರಣಾಗುವಂತೆ ಸೂಚಿಸಿದೆ.
ಕಾಲೂರು ಕ್ರೀಡಾಂಗಣದಲ್ಲಿ ನಡೆದ ‘ಮೃದಂಗ ನಾದಂʼ ಕಾರ್ಯಕ್ರಮದ ವೇಳೆ 15 ಅಡಿ ಎತ್ತರದ ವಿಐಪಿ ಗ್ಯಾಲರಿಯಿಂದ ಬಿದ್ದು ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಏಕೈಕ ಶಾಸಕಿ ಉಮಾ ಥಾಮಸ್ ಗಂಭೀರ ಗಾಯಗೊಂಡಿದ್ದರು. ಕಾರ್ಯಕ್ರಮದ ಆಯೋಜಕರ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಮಾಡಲಾಗಿತ್ತು.
ಮೃದಂಗ ವಿಷನ್ನ ಮಾಲಕರಾದ ನಿಗೋಷ್ಕುಮಾರ್ ಎಂ ಮತ್ತು ಆಸ್ಕರ್ ಕಾರ್ಯಕ್ರಮ ವ್ಯವಸ್ಥಾಪಕರಾದ ಜನೀಶ್ ಪಿಎಸ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಪಿ ಕೃಷ್ಣ ಕುಮಾರ್ ಅವರ ರಜಾಕಾಲೀನ ಪೀಠ ಈ ಆದೇಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜನವರಿ 3ರಂದು (ಶುಕ್ರವಾರ) ನಡೆಯಲಿದೆ.
ಡಿಸೆಂಬರ್ 29, 2024 ರಂದು ಕಾಲೂರಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ 'ಮೃದಂಗ ನಾದಂ' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿತ್ತು. 12,000 ಕಲಾವಿದರು ಏಕಕಾಲದಲ್ಲಿ ಭರತನಾಟ್ಯವನ್ನು ಪ್ರದರ್ಶಿಸಿದ್ದರು.
ಅತಿಥಿಯಾಗಿ ಆಹ್ವಾನಿತರಾಗಿದ್ದ ವಿಧಾನಸಭೆಯ ತೃಕ್ಕಾಕರ ಸದಸ್ಯೆ (ಎಂಎಲ್ಎ) ಉಮಾ ಥಾಮಸ್ ಅವರು ಹದಿನೈದು ಅಡಿ ಎತ್ತರದ ವಿಐಪಿ ಗ್ಯಾಲರಿಯ ಕಿರು ಮಾರ್ಗದಿಂದ ಆಯತಪ್ಪಿ ಜಾರಿ ಬಿದ್ದಿದ್ದರು. ಇದರಿಂದ ಅವರ ಮೆದುಳು, ಬೆನ್ನುಮೂಳೆಯ ಮತ್ತು ಶ್ವಾಸಕೋಶಗಳಿಗೆ ಗಂಭೀರ ಗಾಯಗಳಾಗಿದ್ದವು. ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.
ಗ್ಯಾಲರಿಗೆ ಸೂಕ್ತ ಬ್ಯಾರಿಕೇಡ್ ಅಳವಡಿಸಿರಲಿಲ್ಲ. ವೇದಿಕೆಗೆ ತೆರಳಲು ವಿಶಾಲ ಮಾರ್ಗಗಳಿರಲಿಲ್ಲ ಎಂದು ತಿಳಿದುಬಂದಿತ್ತು. ಶಾಸಕರ ಸಿಬ್ಬಂದಿ ಶಾಲು ವಿನ್ಸೆಂಟ್ ಅವರು ನೀಡಿದ ದೂರಿನ ಆಧಾರದ ಮೇಲೆ, ಬಿಎನ್ಎಸ್ ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.