
ಮೊಬೈಲ್ ಫೋನ್ಗಳು ಇದೀಗ ಐಷಾರಾಮಿ ವಸ್ತುವಾಗಿರದೆ ಅನಿವಾರ್ಯ ಅವಶ್ಯಕತೆಯಾಗಿವೆ ಎಂದಿರುವ ಬಾಂಬೆ ಹೈಕೋರ್ಟ್ ಟೆಲಿಕಾಂ ಟವರ್ ಸ್ಥಾಪನೆಗೆ ಅನುಮತಿ ರದ್ದುಗೊಳಿಸಿದ್ದ ಗ್ರಾಮ ಪಂಚಾಯಿತಿ ನಿರ್ಧಾರವನ್ನು ಈಚೆಗೆ ರದ್ದುಗೊಳಿಸಿದೆ [ಇಂಡಸ್ ಟವರ್ ಲಿಮಿಟೆಡ್ ಮತ್ತಿತರರು ಹಾಗೂ ತಬಮನಗ್ ಗ್ರಾಮ ಪಂಚಾಯತ್ ಇನ್ನಿತರರ ನಡುವಣ ಪ್ರಕರಣ].
ವಿಕಿರಣದಿಂದ ಆರೋಗ್ಯಕ್ಕೆ ಅಪಾಯವಿದೆ ಎಂಬ ನೆಪವೊಡ್ಡಿ ಸಾಂಗ್ಲಿ ಗ್ರಾಮದಲ್ಲಿ ಟವರ್ ನಿರ್ಮಾಣಕ್ಕೆ ಪಂಚಾಯತ್ ವಿರೋಧ ವ್ಯಕ್ತಪಡಿಸಿತ್ತು. ಮೊಬೈಲ್ ಟವರ್ಗಳನ್ನು "ಸುಳ್ಳು ಮಾಹಿತಿಯ ಮೇಲೆ ದಿಢೀರನೆ ರದ್ದುಗೊಳಿಸುವಂತಿಲ್ಲ" ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ನ್ಯಾಯಮೂರ್ತಿಗಳಾದ ಜಿ.ಎಸ್. ಕುಲಕರ್ಣಿ ಮತ್ತು ಅದ್ವೈತ್ ಎಂ. ಸೇತ್ನಾ ಅವರಿದ್ದ ಪೀಠ, "ನಗರ ಪ್ರದೇಶಲ್ಲಿಯೇ ಆಗಿರಲಿ ಅಥವಾ ಕುಗ್ರಾಮವೇ ಆಗಿರಲಿ ಆಧುನಿಕ ಯುಗದಲ್ಲಿ ಇದೀಗ ಮೊಬೈಲ್ ಫೋನ್ಗಳು ಐಷಾರಾಮಿಯಾಗಿರದೆ ಅನಿವಾರ್ಯ ಅವಶ್ಯಕತೆಯಾಗಿವೆ ಎಂಬುದು ವಾಸ್ತವವಾಗಿದ್ದು ತಡೆರಹಿತ ಸಂವಹನಕ್ಕಾಗಿ ಮತ್ತು ದೂರದ ಪ್ರದೇಶಗಳು ಈ ತಾಂತ್ರಿಕ ಕ್ರಾಂತಿಯಿಂದ ವಂಚಿತವಾಗದಂತೆ ನೋಡಿಕೊಳ್ಳಲು, ಮೊಬೈಲ್ ಟವರ್ಗಳ ಸ್ಥಾಪನೆಯನ್ನು ಸುಳ್ಳು ಮಾಹಿತಿ ಆಧರಿಸಿ ದಿಢೀರನೆ ರದ್ದುಗೊಳಿಸುವಂತಿಲ್ಲ" ಎಂದಿತು.
ಜಮೀನಿನ ಒಡೆಯ ಯಶವಂತ್ ಚೌಗುಲೆ ಅವರ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸಲು ಗ್ರಾಮ ಪಂಚಾಯಿತಿ 2023ರಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ನೀಡಿತ್ತು. ಆದರೆ, ವಿಕಿರಣದಿಂದ ಆರೋಗ್ಯಕ್ಕೆ ಅಪಾಯವಿದೆ ಎಂದು ಗ್ರಾಮಸ್ಥರ ಒಂದು ಗುಂಪು ದೂರಿದ ಹಿನ್ನೆಲೆಯಲ್ಲಿ , ಪಂಚಾಯತ್ ಆಗಸ್ಟ್ 8, 2024ರಂದು ಎನ್ಒಸಿ ರದ್ದುಗೊಳಿಸುವ ನಿರ್ಣಯ ಅಂಗೀಕರಿಸಿತು.
ಇದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ ನಿರ್ಣಯ ಕಾನೂನುಬಾಹಿರ ಮತ್ತು ಸ್ವಾಭಾವಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಗ್ಯ ಸಂಬಂಧಿ ಆತಂಕಗಳಿಗೆ ಪೂರಕವಾದ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳು ಇಲ್ಲ ಮತ್ತು ಅನ್ವಯವಾಗುವ ಸರ್ಕಾರಿ ನೀತಿಗಳ ಪ್ರಕಾರ, ಒಮ್ಮೆ ನೀಡಲಾದ ಎನ್ಒಸಿಯನ್ನು ರದ್ದುಗೊಳಿಸಲು ಪಂಚಾಯತ್ಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದಿತು.
ಅಂತೆಯೇ ಪಂಚಾಯತ್ ನಿರ್ಣಯ ರದ್ದುಗೊಳಿಸಿದ ಅದು ಮೊಬೈಲ್ ಟವರ್ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಗ್ರಾಮಸ್ಥರು ಅಡ್ಡಿಪಡಿಸದಂತೆ ನಿರ್ಬಂಧ ವಿಧಿಸಿತು.