ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್‌ ಕೆ ಲೋಕನಾಥ್‌ ನೇಮಕಾತಿ ಆದೇಶ ರದ್ದುಪಡಿಸಿದ ಹೈಕೋರ್ಟ್‌

ನಿಯಮಾವಳಿಗಳ ಅನ್ವಯ ಹೊಸದಾಗಿ ಕುಲಪತಿ ಹುದ್ದೆಗೆ ನೇಮಕಾತಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಿದೆ.
University of Mysore
University of Mysore

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ಪ್ರಾಧ್ಯಾಪಕ ಎನ್ ಕೆ ಲೋಕನಾಥ್‌ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.

ಲೋಕನಾಥ್ ಅವರನ್ನು ಕುಲಪತಿಯಾಗಿ ನೇಮಕ ಮಾಡಿ 2023ರ ಮಾರ್ಚ್‌ 23ರಂದು ಸರ್ಕಾರ ಹೊರಡಿಸಿದ್ದ ಆದೇಶ ರದ್ದು ಕೋರಿ ಪ್ರೊ.ಶರತ್ ಅನಂತಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ನಿಯಮಾವಳಿಗಳ ಅನ್ವಯ ಹೊಸದಾಗಿ ಶೋಧನಾ ಸಮಿತಿ ರಚಿಸಿ ಕುಲಪತಿ ಹುದ್ದೆಗೆ ನೇಮಕಾತಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿದ್ದು, ಲೋಕನಾಥ್‌ ಅವರೂ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯಿದೆ ಅನ್ವಯ ನಿರ್ದಿಷ್ಟ ಅರ್ಹತೆ ಇಲ್ಲದಿದ್ದರೂ ನಿಯಮಾವಳಿ ಉಲ್ಲಂಘಿಸಿ, ಲೋಕನಾಥ್‌ ಅವರನ್ನು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಕುಲಪತಿಯಾಗಿ ನೇಮಕಗೊಂಡಿರುವ ಲೋಕನಾಥ್ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ. ಆದರೆ, ಆ ವಿಷಯವನ್ನು ಅವರು ಮರೆಮಾಚಿದ್ದಾರೆ. ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿ ನಿಯಮಗಳನ್ನು ಗಾಳಿಗೆ ತೂರಿ ಲೋಕನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ದಾಖಲೆಗಳ ಪ್ರಕಾರ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು 20 ದಿನ ಸಮಯ ನೀಡಿ ನವೆಂಬರ್ 8ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಅರ್ಜಿ ಸಲ್ಲಿಕೆಗೆ 2022ರ ನವೆಂಬರ್ 24 ಕೊನೆಯ ದಿನವಾಗಿತ್ತು.  ಅದೇ ದಿನ ಅವರು ಹೈಕೋರ್ಟ್‌ನಲ್ಲಿ ತಮ್ಮ ಪ್ರಕರಣದ ವಿರುದ್ಧ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಜೊತೆಗೆ 2007ರಲ್ಲಿ ನಡೆದ ಪ್ರೊಫೆಸರ್ ನೇಮಕದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆಗೆ ನೇಮಕ ಮಾಡಲಾಗಿದ್ದ ನ್ಯಾಯಮೂರ್ತಿ ರಂಗವಿಠಲಾಚಾರ್ ಆಯೋಗವು ಪ್ರೊಫೆಸರ್ ನೇಮಕಕ್ಕೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮದಂತೆ 10 ವರ್ಷಗಳ ಬೋಧನಾ ಅನುಭವ ಇರಬೇಕು, ಆದರೆ ಲೋಕನಾಥ್ ಅವರಿಗೆ ಅದು ಇಲ್ಲ. ಹೀಗಾಗಿ, ಅವರು ಯುಜಿಸಿ ನಿಯಮದ ಪ್ರಕಾರ ಪ್ರೊಫೆಸರ್ ಹುದ್ದೆಗೆ ಅರ್ಹರಲ್ಲ ಎಂದು ಹೇಳಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

Also Read
ಮೈಸೂರು ವಿವಿ ಕುಲಪತಿ ನೇಮಕ ಆದೇಶ: ತಡೆಯಾಜ್ಞೆ ತೆರವು ಮಾಡಲು ನಿರಾಕರಿಸಿದ ಹೈಕೋರ್ಟ್‌

ಮೈಸೂರಿನ ಜಯಲಕ್ಷ್ಮೀಪುರಂ ನಿವಾಸಿ ಡಿ ವಿ ಶಶಿಧರ್ ಮತ್ತಿತರರು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಲೋಕನಾಥ್ ಮತ್ತಿತರರ ವಿರುದ್ಧ ಆಸ್ತಿ ಒತ್ತುವರಿ ಸಂಬಂಧ 2020ರ ನವೆಂಬರ್ 4ರಂದು ವಂಚನೆ ಪ್ರಕರಣ ದಾಖಲಿಸಿದ್ದರು. ಆ ಕುರಿತ ಪ್ರಕರಣ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದೂ ವಿವರಿಸಲಾಗಿತ್ತು.

ಶೋಧನಾ ಸಮಿತಿಯು ಪ್ರೊ. ಎನ್ ಕೆ ಲೋಕನಾಥ್, ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಡಿ ಎಸ್ ಗುರು ಅವರ ಹೆಸರುಗಳನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು. ರಾಜ್ಯಪಾಲರು 2023ರ ಮಾರ್ಚ್ 23ರಂದು ಪ್ರೊ. ಎನ್ ಕೆ ಲೋಕನಾಥ್ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಅಥವಾ 67 ವರ್ಷಗಳಾಗುವವರೆಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿದ್ದರು.

Related Stories

No stories found.
Kannada Bar & Bench
kannada.barandbench.com