

ಪ್ರತ್ಯೇಕ ಲಡಾಖ್ ರಾಜ್ಯ ಪರ ಹೋರಾಟಗಾರ, ಪರಿಸರ ಕಾರ್ಯಕರ್ತ ಹಾಗೂ ಚಿಂತಕ ಸೋನಮ್ ವಾಂಗ್ಚುಕ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಮತ್ತು ಲಡಾಖ್ ಆಡಳಿತ ತಮ್ಮ ವಾದ ಮಂಡನೆಯನ್ನು ಪೂರ್ಣಗೊಳಿಸಿವೆ.
ವಾಂಗ್ಚುಕ್ ಬಂಧನದ ನಂತರ ಲಡಾಖ್ನಲ್ಲಿ ಉಂಟಾಗಿದ್ದ ಅಶಾಂತಿ ಮತ್ತು ಹಿಂಸಾಚಾರ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಳೆ ಅವರ ಪೀಠದ ಮುಂದೆ ಕೇಂದ್ರ ಸರ್ಕಾರ ಪ್ರತಿಪಾದಿಸಿದೆ. ಹೀಗಾಗಿ ಬಂಧನ ಕ್ರಮ ಪರಿಸ್ಥಿತಿಗೆ ತಕ್ಕಂತೆ ಸಮರ್ಥನೀಯವಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹೇಳಿದರು.
ರಾಷ್ಟ್ರದ ಹಿತಾಸಕ್ತಿಯನ್ನು ಅತ್ಯಂತ ಮಹತ್ವದ ವಿಚಾರವಾಗಿ ಪರಿಗಣಿಸಬೇಕು. ಸಂಪೂರ್ಣ ವಿವೇಚನೆಯಿಂದಲೇ ಬಂಧನಾಧಿಕಾರಿ ವಾಂಗ್ಚುಕ್ ಅವರನ್ನು ಬಂಧಿಸಿದ್ದಾರೆ. ಬಂಧನಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯಾತ್ಮಕ ಭದ್ರತಾ ಕ್ರಮಗಳನ್ನು ಪಾಲಿಸಲಾಗಿದೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಲಾಗಿದೆ. ಲೇಹ್ನಲ್ಲಿ ನಾಲ್ವರು ಸಾವನ್ನಪ್ಪಿದ ಒತ್ತಡದ ಪರಿಸ್ಥಿತಿಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವಾದಿಸಲಾಯಿತು.
ಇದೇ ವೇಳೆ ವಾಂಗ್ಚುಕ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್ ಟಂಕ ಬಂಧನಾಧಿಕಾರಿಗಳು ನೀಡಿರುವ ವಿಡಿಯೋ ದೃಶ್ಯಾವಳಿ ಮತ್ತು ವಾಂಗ್ಚುಕ್ ಹೇಳಿಕೆಗಳ ನಡುವೆ ಸ್ಪಷ್ಟ ವ್ಯತ್ಯಾಸ ಇದೆ ಎಂದರು. ವಿಚಾರಣೆಯ ವೇಳೆ ನ್ಯಾಯಾಲಯ ಮತ್ತು ಸರ್ಕಾರಿ ವಕೀಲರ ನಡುವೆ ನ್ಯಾಯಾಲಯಗಳು ಕೇಳಬಹುದಾದ ಬಗ್ಗೆಯೂ ಚರ್ಚೆ ನಡೆಯಿತು. ಪ್ರಕರಣವನ್ನು ಫೆಬ್ರವರಿ 16ಕ್ಕೆ ಮುಂದೂಡಲಾಗಿದ್ದು ಅಂದು ವಾಂಗ್ಚುಕ್ ಪತ್ನಿ ಪರ ವಕೀಲರು ವಾದ ಆರಂಭಿಸಲಿದ್ದಾರೆ.
ನಿನ್ನೆಯ ವಿಚಾರಣೆ ವೇಳೆ ವಾಂಗ್ಚುಕ್ ಅವರನ್ನು ಆರೋಗ್ಯ ಕಾರಣಗಳನ್ನು ಆಧರಿಸಿ ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹಾಗೂ ಲಡಾಖ್ ಆಡಳಿತ ತಿಳಿಸಿದ್ದವು. ರಾಜಸ್ಥಾನದ ಜೋಧ್ಪುರ ಜೈಲಿನಲ್ಲಿರುವ ವೇಳೆ ಅವರ ಆರೋಗ್ಯ ಹದಗೆಟ್ಟಿರುವುದನ್ನು ಪರಿಗಣಿಸಿ ವಾಂಗ್ಚುಕ್ ಅವರನ್ನು ಬಂಧನದಲ್ಲಿಡುವ ನಿರ್ಧಾರ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತಾದರೂ ಇದಕ್ಕೆ ಸರ್ಕಾರ ಒಪ್ಪಿರಲಿಲ್ಲ.