
ನಿಶ್ಶಬ್ದ ವಲಯಗಳಲ್ಲಿ ಮತ್ತು ಅನುಮತಿಸಲಾದ ಅವಧಿಯನ್ನೂ ಮೀರಿ ಪಟಾಕಿ ಬಳಕೆ ನಿರ್ಬಂಧಿಸುವ ನಿಯಮಾವಳಿಗಳನ್ನು ಕೇರಳದ ಹಲವು ದೇವಾಲಯಗಳು ಉಲ್ಲಂಘಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿ ಕೇರಳ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ [ವೆಂಕಟಾಚಲಂ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಇರುವ ನಿರ್ಬಂಧಗಳನ್ನು ಜಾರಿಗೆ ತರಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರಾದ 59 ವರ್ಷದ ವೆಂಕಿಡಾಚಲಂ ಕೋರಿದ್ದಾರೆ.
ತ್ರಿಶೂರ್ನ ವಡಕ್ಕುಂನಾಥನ್ ಮತ್ತು ಪರಮೇಕಾವು ದೇವಾಲಯಗಳಲ್ಲಿ ಪಟಾಕಿ ಸಿಡಿಸುವ ಸ್ಥಳದಿಂದ ತನ್ನ ಮನೆ 300 ಮೀಟರ್ ದೂರದಲ್ಲಿದ್ದು ವೈಯಕ್ತಿಕವಾಗಿ ತೊಂದರೆ ಅನುಭವಿಸುತ್ತಿರುವುದಾಗಿ ಅರ್ಜಿದಾರರು ವಾದಿಸಿದ್ದಾರೆ.
ಈ ಸ್ಥಳದಲ್ಲಿ ದೊಡ್ಡಮಟ್ಟದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿದ್ದು ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಹಾಗೂ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಈ ವಿಚಾರವಾಗಿ ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬಹುತೇಕ ದೇವಾಲಯಗಳಿಗೆ ಪಟಾಕಿ ಸಿಡಿಸುವ ಸೂಕ್ತ ಪರವಾನಗಿ ಇಲ್ಲ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಪಟಾಕಿಗಳನ್ನು ಸಿಡಿಸಬಾರದು. ಶಬ್ದ ಮಾಲಿನ್ಯವಿಲ್ಲದೆ ಶಾಂತಿಯುತ ಜೀವನವನ್ನು ನಡೆಸುವ ಎಲ್ಲ ಹಕ್ಕು ಅರ್ಜಿದಾರನಾದ ತನಗೆ ಇದೆ. ತನಗೆ ಮಾಲಿನ್ಯ ಮುಕ್ತ ವಾತಾವರಣವನ್ನು ಒದಗಿಸುವುದು ಪ್ರತಿವಾದಿಗಳ ಕರ್ತವ್ಯವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾತ್ರಿ ವೇಳೆ ಪಟಾಕಿಗಳನ್ನು ಬಳಸುವುದು ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಂತ್ರಣ) ನಿಯಮಗಳು, 2000ರ ಉಲ್ಲಂಘನೆ. ಸ್ಥಳೀಯ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಇದರಿಂದ ಧಕ್ಕೆ ಉಂಟಾಗಲಿದೆ. ವಸತಿ ಪ್ರದೇಶಗಳ ನಡುವೆ ಪಟಾಕಿ ಸಿಡಿಸುವುದು ಯಾವುದೇ ದೇಗುಲಗಳ ಆಚರಣೆ ಅಥವಾ ಪದ್ದತಿಯ ಭಾಗವಾಗಿ ನೋಡಲಾಗದು ಎಂದು ಅರ್ಜಿದಾರರು ತಿಳಿಸಿದ್ದಾರೆ.