
ಭ್ರಷ್ಟಾಚಾರದ ಮೂಲಕ ಆಸ್ತಿ ಸಂಪಾದಿಸಿದ್ದ ಆರೋಪ ಹೊತ್ತಿದ್ದ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತೆ ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ [ವೇದ್ ಪಾಲ್ ಗುಪ್ತಾ ಹಾಗೂ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಇನ್ನಿತರರ ನಡುವಣ ಪ್ರಕರಣ].
ಆಸ್ತಿಯ ಖರೀದಿ, ಮಾರಾಟ ಅಥವಾ ವರ್ಗಾವಣೆಗೆ ಹೈಕೋರ್ಟ್ನ ಆಡಳಿತಾಂಗ ನೀಡಿರುವ ಅನುಮತಿ ಆಡಳಿತಾತ್ಮಕ ವ್ಯವಹಾರದ ಅಸಲಿತನದ ಬಗ್ಗೆ ವಿಚಾರಣೆ ನಡೆಸದಂತೆ ಶಿಸ್ತು ಪ್ರಾಧಿಕಾರಕ್ಕೆ ತಡೆ ನೀಡದು ಎಂದು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಅನಿಲ್ ಕ್ಷೇತ್ರಪಾಲ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಸರ್ಕಾರಿ ನೌಕರ ಸಕ್ಷಮ ಪ್ರಾಧಿಕಾರದ ಅರಿವಿಗೆ ತಾರದೆ ಸ್ಥಿರಾಸ್ತಿ ಸ್ವಾಧೀನಪಡಿಸಿಕೊಳ್ಳುವುದನ್ನು ನೌಕರರ ನಡಾವಳಿ ನಿಯಮಾವಳಿ- 1965 ನಿಷೇಧಿಸುತ್ತದೆ. ಅನುಮತಿ ನೀಡುವಾಗ ತನ್ನ ಅರಿವಿಗೆ ಸಂಬಂಧಿಸಿದಂತೆ ಮಾತ್ರ ಪರಿಶೀಲಿಸುತ್ತದೆಯೇ ವಿನಾ ಉದ್ಯೋಗಿಯ ನೈಜ ಸಂಪನ್ಮೂಲ ಅಥವಾ ತನ್ನ ಪ್ರಭಾವದ ಮೂಸೆಯಲ್ಲಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ.
ಹೈಕೋರ್ಟ್ನ ಪೂರ್ಣ ನ್ಯಾಯಾಲಯ 2020 ರಲ್ಲಿ ನ್ಯಾಯಾಂಗ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು. ಹೀಗಾಗಿ ನ್ಯಾಯಾಧೀಶ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳುವಂತಾಗಿತ್ತು. ಶಿಫಾರಸನ್ನು ಅವರು 2021 ರಲ್ಲಿ ಪ್ರಶ್ನಿಸಿದ್ದರು.
ಭ್ರಷ್ಟಾಚಾರ ಎಸಗಿ ಈ ಹಿಂದೆ ಗುರುಗ್ರಾಮ, ಫರೀದಾಬಾದ್ ಹಾಗೂ ಪಂಚಕುಲದಲ್ಲಿ ತಮ್ಮ ಸಂಬಂಧಿಕರ ಹೆಸರಿನಲ್ಲಿ ಅನೇಕ ಆಸ್ತಿ ಸಂಪಾದಿಸಿದ ಆರೋಪ ನ್ಯಾಯಾಧೀಶರ ಮೇಲಿತ್ತು. ಕುತೂಹಲಕರ ಸಂಗತಿ ಎಂದರೆ ಅವರು ಸೇವೆಗೆ ಸೇರ್ಪಡೆಯಾಗುವ ವೇಳೆ ಹರಿಯಾಣದಲ್ಲಿ ಗೊಹಾನಾದಲ್ಲಿ ಚಿಕ್ಕ ವಸತಿ ಆಸ್ತಿಯ ಅರ್ಧ ಭಾಗವಷ್ಟೇ ಅವರ ಹೆಸರಿನಲ್ಲಿತ್ತು.
ನ್ಯಾಯಾಧೀಶರ ಅತ್ತೆ 1998ರಲ್ಲಿ ಆಸ್ತಿ ಖರೀದಿಸಿ ಆರು ತಿಂಗಳೊಳಗೆ ನ್ಯಾಯಾಧೀಶರ ಪತ್ನಿಗೆ ಉಯಿಲು ನೀಡಿರುವುದು ವಿಚಾರಣಾ ವರದಿಯಿಂದ ಬಹಿರಂಗವಾಗಿತ್ತು. ಆದರೆ , ಆಸ್ತಿ ಖರೀದಿಸಲು ತನ್ನ ಅತ್ತೆಗೆ ಸಾಕಷ್ಟು ಆದಾಯದ ಮೂಲಗಳಿವೆ ಎಂಬುದನ್ನು ಸಾಬೀತುಪಡಿಸಲು ನ್ಯಾಯಾಧೀಶ ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ನ್ಯಾಯಾಧೀಶರ ತಂದೆ ಪಂಚಕುಲದಲ್ಲಿ ಖರೀದಿಸಿದ್ದರೂ ಅವರ ಆದಾಯ ತೆರಿಗೆ ದಾಖಲೆಗೂ ಕೈಯಲ್ಲಿದ್ದ ಹಣಕ್ಕೂ ಸಾಕಷ್ಟು ವ್ಯತ್ಯಾಸ ಇರುವುದಾಗಿ ಅದು ವಿವರಿಸಿದೆ.
ಜೊತೆಗೆ ಮಾರುಕಟ್ಟೆ ಮೌಲ್ಯ ಹೆಚ್ಚಿದ್ದರೂ ಪಂಚಕುಲದಲ್ಲಿ ನ್ಯಾಯಾಧೀಶರ ಪತ್ನಿ ಅತ್ಯಲ್ಪ ಮೊತ್ತ ಪಾವತಿಸಿ ಆಸ್ತಿ ಖರೀದಿಸಿದ್ದರು ಎಂದ ನ್ಯಾಯಾಲಯ ಈ ಹಿನ್ನೆಲೆಯಲ್ಲಿ ಶಿಸ್ತು ಪ್ರಾಧಿಕಾರ ನೀಡಿರುವ ಅಭಿಪ್ರಾಯದಲ್ಲಿ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶ ನೀಡುವುದಿಲ್ಲ ಎಂಬುದಾಗಿ ತಿಳಿಸಿ ರಿಟ್ ಅರ್ಜಿ ವಜಾಗೊಳಿಸಿತು.