ಅಂಬೇಡ್ಕರ್‌ ಭಾವಚಿತ್ರ ಗೊಂದಲ: ವಕೀಲರು, ಸಂಘಟನೆಗಳಿಂದ ಮನವಿ ಸಲ್ಲಿಕೆ; ವರದಿ ಕೇಳಿದ ಹೈಕೋರ್ಟ್

ಹೈಕೋರ್ಟ್‌ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಅಂಬೇಡ್ಕರ್‌ ಅವರ ಭಾವಚಿತ್ರ ಇಡುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯು ಪೂರ್ಣ ಪೀಠದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ತಿಳಿಸಿದ ರಿಜಿಸ್ಟ್ರಾರ್‌ ಜನರಲ್.‌
Ambedkar and Karnataka HC
Ambedkar and Karnataka HC

ಗಣರಾಜ್ಯೋತ್ಸವದ ಅಂಗವಾಗಿ ಬುಧವಾರ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರ ಇರಿಸುವುದರ ಸುತ್ತ ಉಂಟಾದ ಗೊಂದಲಗಳ ಕುರಿತು ವಕೀಲರು ಹಾಗೂ ಕೆಲ ಸಂಘಟನೆಗಳು ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ವರದಿ ಕೇಳಿದೆ.

ಈ ಕುರಿತು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಅವರು 'ಬಾರ್‌ ಅಂಡ್‌ ಬೆಂಚ್‌”ಗೆ ಮಾಹಿತಿ ನೀಡಿ, "ಘಟನೆಯ ಸಂಬಂಧ ವಾಸ್ತವಿಕ ಸಂಗತಿಗಳನ್ನು ಅರಿಯಲು ವರದಿಯನ್ನು ಕೇಳಲಾಗಿದೆ. ವರದಿಯನ್ನು ಪರಿಶೀಲಿಸಿ ಹೈಕೋರ್ಟ್‌ ಕ್ರಮಕೈಗೊಳ್ಳಲಿದೆ" ಎಂದರು.

“ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿ ಇಡುವುದಕ್ಕೆ ಸಂಬಂಧಿಸಿದಂತೆ ಪೂರ್ಣ ಪೀಠವು ಹಿಂದೆಯೇ ಗೊತ್ತುವಳಿ ಅಂಗೀಕರಿಸಿದೆ. ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮದಲ್ಲಿ ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಪೂರ್ಣ ಪೀಠದ ಮುಂದೆ ಪರಿಗಣನೆಗೆ ಬಾಕಿ ಇದೆ. ಇಲ್ಲಿ ಅನುಮೋದನೆ ದೊರೆತ ಬಳಿಕ ಅಧಿಕೃತವಾಗಿ ಗಾಂಧೀಜಿ ಅವರ ಭಾವಚಿತ್ರದ ಜೊತೆ ಅಂಬೇಡ್ಕರ್‌ ಅವರ ಭಾವಚಿತ್ರ ಇಡುವುದು ಕಡ್ಡಾಯವಾಗಲಿದೆ” ಎಂದು ಅವರು ತಿಳಿಸಿದರು.

Also Read
ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ಡಾ. ಅಂಬೇಡ್ಕರ್‌ ಪುತ್ಥಳಿ ನಿರ್ಮಾಣವು ಮಹಾನ್‌ ವ್ಯಕ್ತಿಗೆ ಅಗೌರವ ಸೂಚಕ: ಹೈಕೋರ್ಟ್‌

“ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಂಗ ಅಳವಡಿಸಿಕೊಂಡ ಮೇಲೆ ಅದು ಇಲ್ಲಿಗೆ ಅನ್ವಯಿಸುತ್ತದೆ. ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೈಕೋರ್ಟ್‌ ಪೂರ್ಣಪೀಠವು ಈ ಪ್ರಕ್ರಿಯೆ ಕೈಗೊಳ್ಳುತ್ತದೆ. ಆನಂತರ ಸಂಬಂಧಪಟ್ಟ ಎಲ್ಲರಿಗೂ ಸುತ್ತೋಲೆಯನ್ನು ಕಳುಹಿಸಿಕೊಡಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.

Also Read
[ನ್ಯಾಯಾಲಯ ನಿರ್ಮಾಣ] ಹಣಕಾಸಿನ ಕೊರತೆ ನೆಪವೊಡ್ಡಿ ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು: ಹೈಕೋರ್ಟ್‌

ಗಣರಾಜ್ಯೋತ್ಸವದ ಧ್ವಜಾರೋಹಣ ಸಮಾರಂಭದಲ್ಲಿ ರಾಯಚೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ಇರಿಸದೆ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಲಾಗಿದೆ ಎಂದು ಕೆಲ ವ್ಯಕ್ತಿಗಳು, ಸಂಘಟನೆ ಪ್ರತಿನಿಧಿಗಳು ಆರೋಪಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು. ರಾಯಚೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಧ್ವಜಾರೋಹಣ ಸ್ಥಳದಿಂದ ತೆಗೆಸಿದ್ದಾರೆ. ಆ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ.

Related Stories

No stories found.
Kannada Bar & Bench
kannada.barandbench.com