

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ಆರೋಪಿಯಾಗಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಆಡಳಿತಾಧಿಕಾರಿ ಎಸ್. ಶ್ರೀ ಕುಮಾರ್ ಅವರನ್ನು ಬಂಧಿಸದಂತೆ ಕೇರಳ ಹೈಕೋರ್ಟ್ ಬುಧವಾರ ಮಧ್ಯಂತರ ರಕ್ಷಣೆ ನೀಡಿದೆ [ ಎಸ್. ಶ್ರೀಕುಮಾರ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ನವೆಂಬರ್ 28 ರ ಶುಕ್ರವಾರದಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಅಲ್ಲಿಯವರೆಗೆ ಶ್ರೀಕುಮಾರ್ ಅವರನ್ನು ಬಂಧಿಸದಂತೆ ನ್ಯಾ. ಎ ಬದರುದ್ದೀನ್ ಆದೇಶ ಹೊರಡಿಸಿದರು.
ದ್ವಾರಪಾಲಕ ವಿಗ್ರಹಗಳ ಚಿನ್ನ ಲೇಪಿತ ತಾಮ್ರದ ತಗಡುಗಳನ್ನು ನ್ಯಾಯಾಲಯ ಅಥವಾ ಶಬರಿಮಲೆಯ ವಿಶೇಷ ಆಯುಕ್ತರಿಗೆ ತಿಳಿಸದೆಯೇ ದುರಸ್ತಿಗಾಗಿ ಕಳುಹಿಸಲಾಗಿತ್ತು. ಆಗ 4 ಕಿಲೋ ಚಿನ್ನ ಕಳೆದುಹೋಗಿದೆ ಎಂಬ ಕಳವಳ ವ್ಯಕ್ತವಾಗಿತ್ತು. ಮೂರ್ತಿಯ ಹೊದಿಕೆಗಳನ್ನು ತೆಗೆದಿದಿದ್ದ ಟಿಡಿಬಿ, ಉನ್ನಿಕೃಷ್ಣನ್ ಪೊಟ್ಟಿ ಎಂಬ ಭಕ್ತರ ಪ್ರಾಯೋಜಕತ್ವದಡಿಯಲ್ಲಿ ದುರಸ್ತಿ ಕಾರ್ಯವನ್ನು ಚೆನ್ನೈ ಮೂಲದ 'ಸ್ಮಾರ್ಟ್ ಕ್ರಿಯೇಷನ್ಸ್' ಎಂಬ ಸಂಸ್ಥೆಗೆ ವಹಿಸಿತ್ತು. ಉನ್ನಿಕೃಷ್ಣನ್ ಪೊಟ್ಟಿಯವರ ಸಹೋದರಿ ಮಿನಿಯವರ ಮನೆಯಲ್ಲಿ ಕೆಲವು ಚಿನ್ನ ಲೇಪಿತ ತಗಡುಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು.
ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ ಶ್ರೀಕುಮಾರ್ ಆರನೇ ಆರೋಪಿಯಾಗಿದ್ದಾರೆ.
ಪೊಟ್ಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಎ. ಪದ್ಮಕುಮಾರ್ ಅವರನ್ನು ಬಂಧಿಸಲಾಗಿದ್ದು ಅವರು ಸದ್ಯ ಕಂಬಿ ಎಣಿಸುತ್ತಿದ್ದಾರೆ.