

ಸಾರ್ವಜನಿಕ ಕರ್ತವ್ಯ ನಿರ್ವಹಿಸುವಾಗ ಸನಾತನ ಧರ್ಮ ಅಂತರಾಳದಲ್ಲಿರಬೇಕು ಎಂದು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ಶನಿವಾರ ತಿಳಿಸಿದರು.
ಚೆನ್ನೈನಲ್ಲಿ ದಾರಾ ಪ್ರತಿಷ್ಠಾನ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾರ್ವಜನಿಕ ಜೀವನದಲ್ಲಿ ವ್ಯಕ್ತಿಯ ಪಾತ್ರ ಅಥವಾ ಸ್ವಭಾವವನ್ನು ಕೇವಲ ವೃತ್ತಿಪರ ಜ್ಞಾನ ಮಾತ್ರ ನಿರ್ಧರಿಸುವುದಿಲ್ಲ ಎಂದು ಹೇಳಿದರು.
“ನನಗೆ ಇನ್ನು ಸುಮಾರು ನಾಲ್ಕೂವರೆ ವರ್ಷಗಳ ಸೇವಾ ಅವಧಿ ಉಳಿದಿದೆ. ಈ ನಾಲ್ಕೂವರೆ ವರ್ಷಗಳಲ್ಲಿ ನಾನು ಉತ್ಕೃಷ್ಟತೆಯನ್ನು ತೋರಿಸಬೇಕು. ಸನಾತನ ಧರ್ಮ ನನ್ನ ಅಂತರಾಳದಲ್ಲಿ ಉಳಿಯಬೇಕು” ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮ ತಮಗೆ “ಆಲೋಚನೆ ಮತ್ತು ಜವಾಬ್ದಾರಿ” ಎರಡನ್ನೂ ನೀಡಿದೆ ಎಂದು ಅವರು ತಿಳಿಸಿದರು.
ದಾರಾ ಪ್ರತಿಷ್ಠಾನ ನೀಡಿದ ಪ್ರಶಸ್ತಿಗಳು ವಿವಿಧ ಕ್ಷೇತ್ರಗಳ ಸಾಧಕರ ಶ್ರೇಷ್ಠತೆಯನ್ನು ಗುರುತಿಸುತ್ತವೆ ಎಂದು ನ್ಯಾ. ಸ್ವಾಮಿನಾಥನ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಶಸ್ತಿ ಪುರಸ್ಕೃತರಲ್ಲಿನ ಸಾಮಾನ್ಯ ಗುಣವೆಂದರೆ ಕೇವಲ ಸಾಧನೆ ಮಾತ್ರವಲ್ಲ, ವಿನಯ ಮತ್ತು ಸೇವಾ ಮನೋಭಾವವೂ ಆಗಿದೆ ಎಂದು ಅವರು ಹೇಳಿದರು.
ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಗೋಪಾಲ ಸ್ವಾಮಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಉಲ್ಲೇಖಿಸಿದ ನ್ಯಾ. ಸ್ವಾಮಿನಾಥನ್ ವಿಷಯ ಜ್ಞಾನ ಮತ್ತು ಪರಿಣತಿ ಅಗತ್ಯವಾದರೂ, ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸಲು ಅವು ಸಾಲದು ಎಂದರು.
“ವಿಷಯ ಜ್ಞಾನ ಬೇಕು. ಆದರೆ ಅದರಿಂದಷ್ಟೇ ವ್ಯಕ್ತಿಯ ವ್ಯಕ್ತಿತ್ವ ಸಂಪೂರ್ಣವಾಗಿ ರೂಪುಗೊಳ್ಳುವುದಿಲ್ಲ. ಇತರರಿಗೆ ಸೇವೆ ಸಲ್ಲಿಸಬೇಕು. ನಿಮ್ಮ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು,” ಎಂದು ಅವರು ಹೇಳಿದರು.
ಪ್ರಶಸ್ತಿ ಪುರಸ್ಕೃತರಲ್ಲಿ ಕಂಡ ವಿನಯದ ಕುರಿತು ಮಾತನಾಡಿದ ನ್ಯಾಯಮೂರ್ತಿ ಸ್ವಾಮಿನಾಥನ್, ಇಳಯರಾಜಾ ಅವರ ಮೊಮ್ಮಗನ ಉದಾಹರಣೆ ನೀಡಿದರು. ದೊಡ್ಡ ಹಿನ್ನೆಲೆ ಇದ್ದರೂ ಅವರ ಅಹಂಕಾರ ಇಲ್ಲದ ಸ್ವಭಾವ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಶ್ಲಾಘಿಸಿದರು.
ಇಂತಹ ಕಾರ್ಯಕ್ರಮಗಳು ಸಾರ್ವಜನಿಕ ಹುದ್ದೆ ಮತ್ತು ಸಾರ್ವಜನಿಕ ಗೌರವ ಎರಡಕ್ಕೂ ವೃತ್ತಿಪರ ಸಾಮರ್ಥ್ಯದ ಹೊರತಾಗಿ ವಿನಯ, ಸೇವಾ ಮನೋಭಾವ ಮತ್ತು ಬಲವಾದ ನೈತಿಕ ಅಡಿಪಾಯ ಅಗತ್ಯವಿದೆ ಎಂಬುದನ್ನು ನೆನಪಿಸುವ ಸಂದರ್ಭಗಳಾಗಿವೆ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.