“ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದ ಬಳಿಕ ಜಾಮೀನು ನೀಡಲು ನ್ಯಾಯಾಧೀಶರು ಮುಂದಾಗುವುದಿಲ್ಲ:” ನ್ಯಾ. ಅತುಲ್ ಶ್ರೀಧರನ್‌

“ನಾವು (ನ್ಯಾಯಮೂರ್ತಿಗಳು) ಸ್ವತಂತ್ರವಾಗಿದ್ದೇವೆ ಎಂದು ಹೇಳುವುದೇನೋ ಸರಿಯಾಗಿದೆ. ನ್ಯಾಯಮೂರ್ತಿಗಳೂ ಮನುಷ್ಯರೇ. ಅಪರಾಧದ ಸ್ವರೂಪವು ಅವರ ಮನಸ್ಸಿನಲ್ಲಿ ಸುಪ್ತವಾಗಿ ಕೆಲಸ ಮಾಡುತ್ತಿರುತ್ತದೆ,” ಎಂದು ನ್ಯಾ. ಶ್ರೀಧರನ್‌ ಹೇಳಿದರು.
Justice Atul Sreedharan
Justice Atul Sreedharan

ದೇಶದ್ರೋಹದ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಜಾಮೀನು ನೀಡಲು ನ್ಯಾಯಾಧೀಶರು ಹಿಂಜರಿಯುತ್ತಾರೆ. ಏಕೆಂದರೆ ಅಪರಾಧದ ಸ್ವರೂಪ ಮತ್ತು ಅದಕ್ಕೆ ವ್ಯಕ್ತವಾಗುವ ಸಾರ್ವಜನಿಕ ಪ್ರತಿಕ್ರಿಯೆ ಬಗ್ಗೆ ಸುಪ್ತವಾಗಿ ಅವರು ಪ್ರಭಾವಿತರಾಗಿರುತ್ತಾರೆ ಎಂದು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಹೇಳಿದ್ದಾರೆ.

ಲಖನೌನ ಆರ್‌ಎಂಎಲ್‌ಎನ್‌ಎಲ್‌ಯು ಕಾನೂನು ಕಾಲೇಜು ಮತ್ತು ಕ್ಯಾನ್‌ ಫೌಂಡೇಶನ್‌ ಭಾನುವಾರ ಆಯೋಜಿಸಿದ್ದ ʼಜಾಮೀನು ಮತ್ತು ಜೈಲು: ನಿಯಮ ಮತ್ತು ವಿನಾಯಿತಿʼ ವಿಷಯದ ಮೇಲಿನ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ನ್ಯಾಯಾಧೀಶರೂ ಮನುಷ್ಯರಾಗಿದ್ದು, ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾದಾಗ, ಆರೋಪಿತ ವ್ಯಕ್ತಿಯು ಆಡಳಿತ ಸರ್ಕಾರದ ವಿರುದ್ಧ ಭಾಷಣ ಅಥವಾ ಅಭಿಪ್ರಾಯ ವ್ಯಕ್ತಪಡಿಸಿರಬಹುದು ಎಂಬ ವಿಚಾರವೂ ನ್ಯಾಯಾಧೀಶರ ಮನದಲ್ಲಿ ವಿಶ್ಲೇಷಣೆಗೆ ಒಳಪಡುತ್ತದೆ ಎಂದು ನ್ಯಾಮೂರ್ತಿ ಶ್ರೀಧರನ್‌ ಹೇಳಿದರು.

“ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾದ ತಕ್ಷಣ ನ್ಯಾಯಾಧೀಶರು ಅವರಿಗೆ ಜಾಮೀನು ನೀಡಲು ಮನಸ್ಸು ಮಾಡುವುದಿಲ್ಲ. ಏಕೆ? ಜನರು ಏನು ಹೇಳುತ್ತಾರೋ ಎನ್ನುವುದು ಮನಸ್ಸಿನಲ್ಲಿ ಶುರುವಾಗುತ್ತದೆ. ನಾವು (ನ್ಯಾಯಮೂರ್ತಿಗಳು) ಸ್ವತಂತ್ರವಾಗಿದ್ದೇವೆ ಎಂದು ಹೇಳುವುದೇನೋ ಸರಿ. ಆದರೆ, ನ್ಯಾಯಮೂರ್ತಿಗಳೂ ಮನುಷ್ಯರೇ. ಅಪರಾಧದ ಸ್ವರೂಪವು ಅವರುಗಳ ಮಿದುಳಿನಲ್ಲಿ ಸುಪ್ತವಾಗಿ ಕೆಲಸ ಮಾಡುತ್ತಿರುತ್ತದೆ. ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾನೆ ಎಂದು ವ್ಯಕ್ತಿಗಳ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ, ಜೈಲಿನಲ್ಲಿ ಇಡಲಾಗುತ್ತದೆ. ಏಕೆ, ಅವರ ಅಪರಾಧವೇನು? ಇಂದು ಆಡಳಿತ ನಡೆಸುತ್ತಿರುವ ಸರ್ಕಾರದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವುದು ಅಥವಾ ವಿಚಾರ ಹೊಂದಿದ ಮಾತ್ರಕ್ಕೆ ಅವರನ್ನು ಬಂಧಿಸಲಾಗುತ್ತದೆ. ಇಂಥ ಅಸಂಬಂದ್ಧ ಕಾನೂನುಗಳು ಹಾನಿಯುಂಟು ಮಾಡುತ್ತವೆ,” ಎಂದು ಅವರು ಹೇಳಿದ್ದಾರೆ.
“ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾದ ತಕ್ಷಣ ನ್ಯಾಯಾಧೀಶರು ಅವರಿಗೆ ಜಾಮೀನು ನೀಡಲು ಮನಸ್ಸು ಮಾಡುವುದಿಲ್ಲ."
ನ್ಯಾಯಮೂರ್ತಿ ಅತುಲ್‌ ಶ್ರೀಧರನ್‌

ಸಮುದಾಯ ಸೇವೆಯನ್ನು ಜಾಮೀನು ನೀಡಲು ಷರತ್ತು ಎಂದು ಪರಿಗಣಿಸಬಹುದೇ ಎಂಬ ಚರ್ಚಾ ನಿರ್ವಾಹಕ ವಿಧಿ ಥಾಕರ್‌ ಅವರ ನಿರ್ದಿಷ್ಟ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.

"ನಾವು ಇದೀಗ ಸಾಗುತ್ತಿರುವ ಈ 'ರಾಷ್ಟ್ರ ವಿರೋಧಿ' ಘಟ್ಟದಲ್ಲಿ ದೇಶದ್ರೋಹದ ಅರ್ಥವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ದುಸ್ಸಾಧ್ಯವಾಗಿದೆ."
ನ್ಯಾಯಮೂರ್ತಿ ಅತುಲ್‌ ಶ್ರೀಧರನ್

ರಾಷ್ಟ್ರದ್ರೋಹ ಎಂಬುದು ಅಸ್ಪಷ್ಟವಾಗಿದ್ದು, ಅಪರಾಧದ ಬಾಹ್ಯಗೆರೆಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗದು ಎಂದು ಹೇಳಿದ್ದಾರೆ. ನಾವು ಇದೀಗ ಸಾಗುತ್ತಿರುವ ಈ ರಾಷ್ಟ್ರ ವಿರೋಧಿ ಹಂತವು ಅಸಂಬದ್ಧವಾಗಿದೆ. ಮುಂದೆ ದೇಶದ್ರೋಹ ಎಂದರೆ ಏನು ಎಂಬುದರ ಅರ್ಥವನ್ನು ಸುಸ್ಪಷ್ಟವಾಗಿ ವ್ಯಾಖ್ಯಾನಿಸಲಾಗದು ಎಂದು ಹೇಳಿದ್ದಾರೆ.

ಕಳವು, ಅತ್ಯಾಚಾರ, ಕೊಲೆ ಇತ್ಯಾದಿ ಅಪರಾಧಗಳು ಪ್ರತಿಯೊಂದು ಸಮಾಜದಲ್ಲೂ ಅಪರಾಧಗಳು ಕಾನೂನಿನ ಪ್ರಕಾರ ಮಾತ್ರ ಅಕ್ರಮಗಳಾಗಿದ್ದು, ವೈಯಕ್ತಿಕ ಸ್ವಾತಂತ್ರ್ಯ ಧಕ್ಕೆ ಉಂಟು ಮಾಡುತ್ತವೆ ಎಂದಿದ್ದಾರೆ. ಇಂಥ ಪ್ರಕರಣಗಳಲ್ಲಿ ಜಾಮೀನು ನೀಡಲು ಕಡ್ಡಾಯವಾಗಿ ಸಮುದಾಯ ಸೇವೆವನ್ನು ಪರಿಗಣಿಸಲಾಗುತ್ತದೆ ಎಂದಿರುವ ನ್ಯಾ. ಶ್ರೀಧರನ್‌ ಅವರು ಪೂರ್ವಾಪರ ಯೋಚಿಸದೇ ಕೆಲವು ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಟೀಕಿಸಿದರು.

ಇದಕ್ಕೆ ತ್ರಿವಳಿ ತಲಾಕ್‌ ಅಪರಾಧೀಕರಣಗೊಳಿಸಿರುವುದನ್ನು ಉದಾಹರಣೆಯನ್ನಾಗಿ ನೀಡಿದ ನ್ಯಾ. ಶ್ರೀಧರನ್‌ ಅವರು “ಬಹುದಿನಗಳಿಂದ ಕಾನೂನಾಗಿದ್ದ ನಡೆಯನ್ನು ಅಪರಾಧವನ್ನಾಗಿಸಿದಾಗ ಏನಾಗುತ್ತದೆ. ಇತ್ತೀಚೆಗೆ ಜಾರಿಗೊಳಿಸಲಾದ ತಲಾಕ್‌ ಕಾನೂನನ್ನೇ ತೆಗೆದುಕೊಳ್ಳಿ. ನಮ್ಮ ದೇಶದಲ್ಲಿ ಅದು ಸಾಮಾನ್ಯ ಮತ್ತು ಕಾನೂನಾತ್ಮಕವಾಗಿತ್ತು. ತ್ರಿವಳಿ ತಲಾಕ್‌ ಅನ್ನು ರಾಜ್ಯ ಸರ್ಕಾರವು ಶಾಸನ ವಿರೋಧಿಯಾಗಿಸಿರಬಹುದು. ಕಾನೂನು ಅದನ್ನು ಹಾಗೆ ಮಾಡಿರಬಹುದು. ಅದನ್ನು ಕ್ರಿಮಿನಲ್‌ ನಡೆ ಎಂದು ಮಾಡಿದಾಗ ಸಮಸ್ಯೆಗಳು ಉದ್ಭವವಾಗುತ್ತವೆ” ಎಂದು ಹೇಳಿದ್ದಾರೆ.

"ತ್ರಿವಳಿ ತಲಾಕ್‌ನ ಪರಿಣಾಮಗಳನ್ನು ರಾಜ್ಯ ಸರ್ಕಾರವು ಶಾಸನ ವಿರೋಧಿ ಎಂದು ಮಾಡಿರಬಹುದು, ಅದು ಸರಿ. ಆದರೆ, ಅದನ್ನು ಕ್ರಿಮಿನಲ್‌ ನಡೆ ಎಂದು ಮಾಡಿದ್ದು ಸಮಸ್ಯೆಗಳು ಉದ್ಭವಿಸಲು ಕಾರಣವಾಯಿತು.”
ನ್ಯಾ. ಅತುಲ್‌ ಶ್ರೀಧರನ್‌

ಮಧ್ಯ ಪ್ರದೇಶದಲ್ಲಿ ಸಾಕಷ್ಟು ಜನರು ಅವಿದ್ಯಾವಂತರಾಗಿದ್ದು, ಅದು ಕ್ರಿಮಿನಲ್‌ ಅಪರಾಧ ಎಂಬುದರ ಬಗ್ಗೆ ಸಾಕಷ್ಟು ಮಂದಿಗೆ ತಿಳಿದಿಲ್ಲ. “ಮಧ್ಯ ಪ್ರದೇಶದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ ಇದೆ. ನಿಜಕ್ಕೂ ಸಾಕ್ಷರತೆಯ ಪ್ರಮಾಣ ದಯನೀಯವಾಗಿದೆ. ಇಂಥ ಪ್ರಕರಣಗಳು ಬಂದಾಗ ವ್ಯಕ್ತಿಗೆ ಅಪರಾಧ ಯಾವುದು ಎಂಬುದೇ ತಿಳಿದಿರುವುದಿಲ್ಲ (ತ್ರಿವಳಿ ತಲಾಕ್‌ ಹೇಳುವುದು). ವಾಸ್ತವದಲ್ಲಿ ಬ್ರಿಟನ್‌ ಅಥವಾ ಅಮೆರಿಕಾದಲ್ಲಿ ಬಳಸಲಾಗುವ ಮಾನದಂಡವನ್ನು ಇಲ್ಲಿ ಅನ್ವಯಿಸಲಾಗದು. ಭಾರತದಲ್ಲಿ ಸಾಕಷ್ಟು ಮಂದಿ ಅನಕ್ಷರಸ್ಥರಿದ್ದಾರೆ ಎಂಬ ವಾಸ್ತವವನ್ನು ಪರಿಗಣಿಸಬೇಕು” ಎಂದು ವಿವರಿಸಿದ್ದಾರೆ.

ಅದೇ ರೀತಿ, ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಪೋಕ್ಸೊ ಕಾಯಿದೆ ತಕ್ಷಣದ ಪ್ರತಿಕ್ರಿಯೆ ಅಷ್ಟೆ. ಇದರಿಂದ ಶಾಸಬದ್ಧವಾಗಿ ಮದುವೆಯ ವಯಸ್ಸು ದಾಟದ ಹೆಣ್ಣು ಮಕ್ಕಳನ್ನು ಕರೆದುಕೊಂಡು ಪರಾರಿಯಾದ ಯುವಕರನ್ನು ಬಂಧಿಸಿ, ಅವರಿಗೆ ಶಿಕ್ಷೆ ವಿಧಿಸುವುದು ನಡೆಯುತ್ತಿದೆ.

“ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ಅಪರಾಧಿ ಎಂದು ಘೋಷಿತವಾಗಿ ಆತನಿಗೆ ಹತ್ತು ವರ್ಷ ಜೈಲು ಶಿಕ್ಷೆಯಾಗಿತ್ತು. ಅದು ಕಾನೂನಾತ್ಮಕವಾಗಿ ಅತ್ಯಾಚಾರವಾಗಿದ್ದು, ಯುವತಿಗೆ ಹದಿನಾರು ವರ್ಷವಾಗಿತ್ತು, ಯುವಕನಿಗೆ ಹತ್ತೊಂಭತ್ತು ವರ್ಷಗಳಾಗಿದ್ದವು. ಇಬ್ಬರೂ ಪರಾರಿಯಾಗಿದ್ದರು. ಎರಡು ವರ್ಷಗಳ ಬಳಿಕ ಅವರಿಬ್ಬರನ್ನೂ ಬಂಧಿಸಿ ಕರೆತರಲಾಗಿತ್ತು. ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ ಆತನಿಗೆ ಹತ್ತು ವರ್ಷ ಶಿಕ್ಷೆ ವಿಧಿಸಲಾಗಿತ್ತು. ಮಗುವನ್ನು ಎತ್ತಿಕೊಂಡಿದ್ದ ಆತನ ಪತ್ನಿ “ನೀವು ಆತನ ಶಿಕ್ಷೆಯನ್ನು ಅಮಾನತುಗೊಳಿಸದಿದ್ದರೆ ನನ್ನ ಮತ್ತು ಮಗುವನ್ನು ನೋಡಿಕೊಳ್ಳುವವರು ಯಾರು. ಸರ್ಕಾರವೇ?” ಎಂದು ಪ್ರಶ್ನಿಸಿದ್ದಳು ಎಂದು ಅವರು ವಿವರಿಸಿದರು.
"ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಪೋಕ್ಸೊ ಕಾಯಿದೆ ತಕ್ಷಣದ ಪ್ರತಿಕ್ರಿಯೆ ಅಷ್ಟೆ."
ನ್ಯಾ. ಅತುಲ್‌ ಶ್ರೀಧರನ್‌

ಇಂಥ ಪ್ರಕರಣಗಳಲ್ಲಿ ಕನಿಷ್ಠ ಹತ್ತು ವರ್ಷಗಳ ಶಿಕ್ಷೆಗೆ ಬದಲಾಗಿ ಸಮುದಾಯ ಸೇವೆಯನ್ನು ಶಿಕ್ಷೆ ವಿಧಿಸುವಾಗ ಪರಿಗಣಿಸಲು ನ್ಯಾಯಾಧೀಶರಿಗೆ ಅವಕಾಶ ಮಾಡಿಕೊಡಬೇಕುಎ ಎಂದು ನ್ಯಾ. ಶ್ರೀಧರನ್‌ ಹೇಳಿದ್ದಾರೆ.

Also Read
ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಒಳಗಿನಿಂದಲೇ ಬೆದರಿಕೆ, ವಕೀಲರ ಸಂಘ ವಿಭಜನೆ; ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್

“ಇವುಗಳು (ಪೋಕ್ಸೊ ಮತ್ತು ತ್ರಿವಳಿ ತಲಾಕ್‌ ಅಪರಾಧೀಕರಣ) ಅಪರಾಧಗಳಲ್ಲ. ಆದರೆ, ಆಯ್ದ ಗುಂಪಿನ ಜನರನ್ನು ತೃಪ್ತಿಪಡಿಸಲು ಇವನ್ನು ಸೃಷ್ಟಿಸಲಾಗಿದೆ. ನಿರ್ಭಯಾ ಪ್ರಕರಣಕ್ಕೆ ಪೋಕ್ಸೊ ತಕ್ಷಣದ ಪ್ರತಿಕ್ರಿಯೆಯಾಗಿದೆ. ಶಾಸನಬದ್ಧ (ಒಪ್ಪಿಗೆ ಮೂಲಕ) ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕನಿಷ್ಠ ಹತ್ತು ವರ್ಷಗಳ ಶಿಕ್ಷೆ ವಿಧಿಸುವುದಕ್ಕಿಂತ ಹೆಚ್ಚಿನ ಆಲೋಚನೆ ಮಾಡಬೇಕಾಗುತ್ತದೆ. ಇದು ವಿವೇಕಯುತವಲ್ಲ,” ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಸಿದ್ಧಾರ್ಥ್‌ ಮೃದುಲ್‌ ಮತ್ತು ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ವೆಬಿನಾರ್‌ನಲ್ಲಿ ಮಾತನಾಡಿದರು.

Related Stories

No stories found.
Kannada Bar & Bench
kannada.barandbench.com