

ಖಾಸಗಿ ಜಮೀನಿನಲ್ಲಿ ಯುದ್ಧ ಸ್ಮಾರಕ ನಿರ್ಮಿಸಲು ವ್ಯಕ್ತಿಗಳು ಅನುಮತಿ ಪಡೆಯಲೇಬೇಕು ಎಂದು ಸರ್ಕಾರ ಒತ್ತಾಯಿಸಲು ಸಾಧ್ಯವಿಲ್ಲ, ಅದರಲ್ಲಿಯೂ ಇಂತಹ ಭೂಮಿಯಲ್ಲಿ ಯುಎಪಿಎ ಅಡಿ ಆರೋಪಿಯಾಗಿದ್ದ ದಿವಂಗತ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಅವರ ಸ್ಮಾರಕ ಸ್ಥಾಪಿಸಲು ನ್ಯಾಯಾಲಯ ಈ ಹಿಂದೆಯೇ ಅನುಮತಿ ನೀಡಿರುವಾಗ ಸರ್ಕಾರ ಹಾಗೆ ಒತ್ತಾಯಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ತಿಳಿಸಿದೆ [ ಶಿವ ಕಲೈಮಣಿ ಅಂಬಲಂ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].
ಸ್ಟ್ಯಾನ್ ಸ್ವಾಮಿ ಅವರನ್ನು ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಎಂದು ಪರಿಗಣಿಸಲಾಗಿದ್ದರೂ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಅವರು ಆರೋಪಿಯಾಗಿದ್ದರು ಎಂಬುದು ವಾಸ್ತವ ಎಂದು ಹೈಕೋರ್ಟ್ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಹೇಳಿದರು.
" ಸ್ಟ್ಯಾನ್ ಸ್ವಾಮಿ ಅವರನ್ನು ಸಮಾಜದ ಕೆಲವು ವರ್ಗಗಳು ಬುಡಕಟ್ಟು ಹಕ್ಕುಗಳ ಹೋರಾಟಗಾರ ಎಂದು ನೋಡುತ್ತವೆ ಎಂಬುದು ನಿಜ. ಆದರೆ ಅವರು ಯುಎಪಿಎ ಅಡಿಯಲ್ಲಿ ಉದ್ಭವಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂಬುದು ವಾಸ್ತವ. ಅವರು ಜೈಲಿನಲ್ಲಿ ನಿಧನರಾದರು" ಎಂದು ನ್ಯಾಯಾಲಯ ಹೇಳಿದೆ.
1755ರ ನಾಥಮ್ ಕಣವೈ ಯುದ್ಧದ ಸ್ಮರಣಾರ್ಥ ದಿಂಡಿಗಲ್ ಜಿಲ್ಲೆಯ ಜಮೀನೊಂದರಲ್ಲಿ ಸ್ಮಾರಕ ನಿರ್ಮಿಸಲು ಅನುಮತಿ ನೀಡದ ನಾಥಮ್ ತಹಶೀಲ್ದಾರ್ ಅವರ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಿಯೂಷ್ ಸೇಥಿಯಾ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣದ ವಿಚಾರಣೆ ವೇಳೆ, ಖಾಸಗಿ ಭೂಮಿಯಲ್ಲಿ ಸ್ಟ್ಯಾನ್ ಸ್ವಾಮಿ ಅವರ ಸ್ಮಾರಕ ಸ್ಥಾಪಿಸಲು ಅನುಮತಿ ನೀಡದ ತಹಶೀಲ್ದಾರ್ ಆದೇಶವನ್ನು ಈ ಹಿಂದೆ ಹೈಕೋರ್ಟ್ ರದ್ದುಗೊಳಿಸಿತ್ತು ಎಂದು ನ್ಯಾ. ಸ್ವಾಮಿನಾಥನ್ ನೆನೆದರು. ಖಾಸಗಿ ಭೂಮಿಯಲ್ಲಿ ಯುದ್ಧ ಸ್ಮಾರಕ ಸ್ಥಾಪನೆಗೂ ಇದೇ ತತ್ವ ಅನ್ವಯವಾಗುತ್ತದೆ ಎಂದು ಅವರು ಹೇಳಿದರು.
"ಸ್ಟ್ಯಾನ್ ಸ್ವಾಮಿ ಅವರ ಸ್ಮಾರಕ ನಿರ್ಮಿಸಲು ಅನುಮತಿ ಅಗತ್ಯವಿಲ್ಲದಿದ್ದರೆ, ನಾಥಮ್ ಕಣವೈ ಯುದ್ಧದ ಸ್ಮಾರಕ ನಿರ್ಮಿಸಲೂ ಖಂಡಿತ ಯಾವುದೇ ಅನುಮತಿ ಅಗತ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ನಾಥಮ್ ಕಣ್ಲಿವೈಯಲ್ಲಿ 1755 ರಲ್ಲಿ ನಡೆದ ಯುದ್ಧದ ಸ್ಮರಣಾರ್ಥವಾಗಿ ತಮ್ಮ ಭೂಮಿಯಲ್ಲಿ ಸ್ಮಾರಕ ನಿರ್ಮಿಸಲು ಕೋರಿದ್ದ ಶಿವ ಕಲೈಮಣಿ ಅಂಬಲಮ್ ಅವರ ಅರ್ಜಿಯನ್ನು ನ್ಯಾಯಾಲಯ ಆಲಿಸಿತು.
"ವಸಾಹತುಶಾಹಿ ಪಡೆಗಳ ಮೇಲೆ ಸ್ಥಳೀಯ ಪಡೆಗಳ ವಿಜಯದ ಸ್ಮರಣಾರ್ಥ ಅರ್ಜಿದಾರರು ಸ್ಮಾರಕ ನಿರ್ಮಿಸಲು ಬಯಸುತ್ತಾರೆ. ಅಂತಹ ಘಟನೆಗಳನ್ನು ಆಚರಿಸಬೇಕು ಮತ್ತು ಐತಿಹಾಸಿಕ ಸ್ಮರಣೆಗಾಗಿ ಸಂರಕ್ಷಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
ಸ್ಟ್ಯಾನ್ ಸ್ವಾಮಿ ಅವರನ್ನು ಸಮಾಜದ ಕೆಲವು ವರ್ಗಗಳು ಬುಡಕಟ್ಟು ಹಕ್ಕುಗಳ ಹೋರಾಟಗಾರ ಎಂದು ನೋಡುತ್ತವೆ ಎಂಬುದು ನಿಜ. ಆದರೆ ಅವರು ಯುಎಪಿಎ ಅಡಿಯಲ್ಲಿ ಉದ್ಭವಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು ಎಂಬುದು ವಾಸ್ತವ.
ನ್ಯಾಯಮೂರ್ತಿ ಜಿ. ಆರ್. ಸ್ವಾಮಿನಾಥನ್
ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟಗಳನ್ನು ಸ್ಮರಿಸುವುದು ಸಾಂವಿಧಾನಿಕ ಕರ್ತವ್ಯ ಎಂದು ಕೂಡ ನ್ಯಾಯಾಲಯ ಹೇಳಿತು. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ತಮಿಳು ನೆಲದಲ್ಲಿ ನಡೆಯಿತು, 1857 ರಲ್ಲ ಎಂದು ಹೇಳುವವರು ಕೂಡ ಇದ್ದಾರೆ.
ಅಂತಹ ವಿವಾದಾತ್ಮಕ ಐತಿಹಾಸಿಕ ಪ್ರಶ್ನೆಗಳನ್ನು ನಿರ್ಧರಿಸಲು ಸಾಧ್ಯವಿಲ್ಲವಾದರೂ, ಮಧುರೈನಲ್ಲಿಯೂ ವಸಾಹತುಶಾಹಿ ಆಳ್ವಿಕೆಗೆ ಪ್ರತಿರೋಧ ನಡೆದಿರುವುದನ್ನು ನ್ಯಾಯಾಂಗ ಪರಿಗಣಿಸಬಹುದು. ವಸಾಹತುಶಾಹಿ ಶಕ್ತಿಗಳ ವಿರುದ್ಧದ ಇಂತಹ ವಿಜಯಗಳು ಸ್ಮರಣೀಯವಾಗಿವೆ ಎಂದಿತು.
ಅಲ್ಲದೆ, ಖಾಸಗಿ ಪತ್ತಾ ಭೂಮಿಯಲ್ಲಿ ಪ್ರತಿಮೆ ಅಥವಾ ಸ್ಮಾರಕ ಸ್ಥಾಪನೆಗೆ ಅನುಮತಿ ಪಡೆಯಬೇಕು ಎಂದು ಹೇಳುವ ಯಾವುದೇ ಕಾನೂನು ಇಲ್ಲ. ಆಡಳಿತಾತ್ಮಕ ನೋಟಿಸ್ಗಳು ಆಸ್ತಿ ಹಕ್ಕುಗಳ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ ಎಂದು ಅದು ಹೇಳಿತು.
ಖಾಸಗಿ ಜಮೀನಿನ ಶಾಸನಬ ಸಾರ್ವಜನಿಕ ಪೂಜೆಗೆ ಸಂಬಂಧಿಸಿದ ಧಾರ್ಮಿಕ ಕಟ್ಟಡಗಳಿಗೆ ಮಾತ್ರ ಕಾನೂನುಬದ್ಧ ಅನುಮತಿ ಅಗತ್ಯವಿದ್ದು, ಖಾಸಗಿ ಭೂಮಿಯಲ್ಲಿನ ಸ್ಮಾರಕಗಳಿಗೆ ಇಂತಹ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.
[ತೀರ್ಪಿನ ಪ್ರತಿ]