
ವರದಕ್ಷಿಣೆ ನಿಷೇಧ ಕಾಯಿದೆ- 1961ರ ಕೆಲ ಪ್ರಮುಖ ಸೆಕ್ಷನ್ಗಳು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ [ರೂಪಶ್ರೀ ಸಿಂಗ್ ಮತ್ತು ಭಾರತ ಒಕ್ಕೂಟ ಸರ್ಕಾರ ನಡುವಣ ಪ್ರಕರಣ].
ಬದಲಿಗೆ ಈ ವಿಚಾರವನ್ನು ಸಂಸತ್ ಗಮನಕ್ಕೆ ತರುವಂತೆ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ತಿಳಿಸಿತು.
ಕಾಯಿದೆಯ ಸೆಕ್ಷನ್ 2, 3 ಮತ್ತು 4 ಅನ್ನು ಅರ್ಜಿದಾರೆ ರೂಪಶ್ರೀ ಸಿಂಗ್ ಪ್ರಶ್ನಿಸಿದ್ದರು.
ಸೆಕ್ಷನ್ 2 ವರದಕ್ಷಿಣೆಯನ್ನು ವ್ಯಾಖ್ಯಾನಿಸಿದರೆ ಸೆಕ್ಷನ್ 3 ವರದಕ್ಷಿಣೆ ನೀಡುವುದು ಮತ್ತು ತೆಗೆದುಕೊಳ್ಳುವುದಕ್ಕೆ ಶಿಕ್ಷೆ ವಿಧಿಸುತ್ತದೆ. ವರದಕ್ಷಿಣೆ ಬೇಡಿಕೆ ಇಟ್ಟರೆ ಸೆಕ್ಷನ್ 4ರ ಅಡಿ ಅಪರಾಧವಾಗುತ್ತದೆ.
"ಕಾನೂನುಗಳು ಅಮಾನ್ಯವಾಗಿದೆ. ನಾನು ಸಾರ್ವಜನಿಕ ಮನೋಭಾವದಿಂದ ಹೇಳುತ್ತಿರುವೆ" ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
"ವಜಾ ಮಾಡಲಾಗಿದೆ. ಹೋಗಿ ಸಂಸತ್ತಿಗೆ ತಿಳಿಸಿ" ಎಂದು ಪೀಠ ನುಡಿಯಿತು.