ಟ್ವಿಟರ್‌ ಖಾತೆ ನಿರ್ಬಂಧ: ಪ್ರತ್ಯುತ್ತರ ದಾಖಲಿಸಲು ಟ್ವಿಟರ್‌ಗೆ ಕಾಲಾವಕಾಶ; ಸೆ.26ಕ್ಕೆ ವಿಚಾರಣೆ ಮುಂದೂಡಿಕೆ

ಪ್ರತ್ಯುತ್ತರ ಸಲ್ಲಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಿದ ನ್ಯಾಯಾಲಯ. ಪ್ರತಿಯನ್ನು ಪ್ರತಿವಾದಿಗಳಿಗೆ ಸಲ್ಲಿಸಲು ಸೂಚನೆ. ಎಎಸ್‌ಜಿ ಸಲ್ಲಿಸಿರುವ ದಾಖಲೆಯನ್ನು ಜತನದಿಂದ ಇಡಲು ಆದೇಶಿಸಿದ ನ್ಯಾಯಾಲಯ.
Twitter and Karnataka High Court
Twitter and Karnataka High Court

ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧಕ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಸೆಪ್ಟೆಂಬರ್‌ 26ಕ್ಕೆ ಮುಂದೂಡಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಟ್ವಿಟರ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಕೇಂದ್ರ ಸರ್ಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ನಾವು ವಾದ ಮಂಡಿಸಲು ಸಿದ್ಧವಾಗಿದ್ದೇವೆ. ಅರ್ಜಿದಾರರು ವಾದ ಆರಂಭಿಸಬಹುದು” ಎಂದರು.

ಆಗ ಪೀಠವು ಹಿರಿಯ ವಕೀಲರಾದ ಮುಕುಲ್‌ ರೋಹಟ್ಗಿ ಮತ್ತು ಅಶೋಕ್‌ ಹಾರನಹಳ್ಳಿ ಅವರು ಪ್ರತ್ಯುತ್ತರ ಸಲ್ಲಿಸಲು ಕಾಲಾವಕಾಶ ಕೋರುತ್ತಿದ್ದಾರೆ ಎಂದರು. ಇದಕ್ಕೆ ಎಸ್‌ಜಿ ಮೆಹ್ತಾ “ಪ್ರತ್ಯುತ್ತರದ ಪ್ರತಿಯನ್ನು ಮುಂಚಿತವಾಗಿ ನಮಗೂ ತಲುಪಿಸಲು ಕೋರಿಕೆ” ಎಂದರು.

Also Read
[ಟ್ವಿಟರ್‌ ಖಾತೆ ನಿರ್ಬಂಧ] ಅಪಪ್ರಚಾರ ಮಾಡಲು ದೇಶ ವಿರೋಧಿಗಳಿಂದ ಟ್ವಿಟರ್‌ ಬಳಕೆ: ಕೇಂದ್ರ ಸರ್ಕಾರ

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಅವರು “ಕೇಂದ್ರ ಸರ್ಕಾರದ ಆಕ್ಷೇಪಣೆಯ ಜೊತೆಗೆ ಕೆಲವು ಪ್ರಮುಖ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದು, ಅದನ್ನು ಜತನದಿಂದ ಇಡಲು ಮನವಿ ಮಾಡುತ್ತೇನೆ” ಎಂದರು.

Also Read
ಟ್ವಿಟರ್‌ ಖಾತೆ ನಿರ್ಬಂಧ: ಆಕ್ಷೇಪಣೆ ಸಲ್ಲಿಸಲು ಕೇಂದ್ರಕ್ಕೆ ಕಾಲಾವಕಾಶ, ಸೆ. 8ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಇದನ್ನು ಆಲಿಸಿದ ಪೀಠವು ಪ್ರತ್ಯುತ್ತರ ಸಲ್ಲಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದರ ಪ್ರತಿಯನ್ನು ಪ್ರತಿವಾದಿಗಳೂ ನೀಡಬೇಕು. ಎಎಸ್‌ಜಿ ಸಲ್ಲಿಸಿರುವ ದಾಖಲೆಯನ್ನು ಜತನದಿಂದ ಇಡಬೇಕು ಎಂದು ಆದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 26ಕ್ಕೆ ಮುಂದೂಡಿದರು.

Related Stories

No stories found.
Kannada Bar & Bench
kannada.barandbench.com