
ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಾನೂನು ಘಟಕ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿವಾದಾತ್ಮಕ ಭಾಷಣ ಮಾಡಿದ್ದರು.
ತಮ್ಮ ಭಾಷಣದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ; 'ಕಠ್ಮುಲ್ಲಾಗಳು' ದೇಶವಿರೋಧಿಗಳು ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಅವರು ಹೀಗೆ ವಿವಾದದ ಕೇಂದ್ರ ಬಿಂದುವಾಗಿರುವುದು ಇದೇ ಮೊದಲಲ್ಲ.
ನ್ಯಾಯಾಲಯದ ಹೊರಗೆ ನೀಡುವ ವಿವಾದಾತ್ಮಕ ಹೇಳಿಕೆಗಳಲ್ಲದೆ ತಮ್ಮ ಕೆಲ ತೀರ್ಪುಗಳಲ್ಲಿಯೂ ಅವರು ತಮ್ಮ ಸೈದ್ಧಾಂತಿಕ ಅಭಿಪ್ರಾಯಗಳನ್ನು ಮಂಡಿಸಿದ ಉದಾಹರಣೆಗಳಿವೆ.
ಅಕ್ಟೋಬರ್ 2021 ರಲ್ಲಿ ಅವರು ಶ್ರೀರಾಮ , ಶ್ರೀಕೃಷ್ಣ , ರಾಮಾಯಣ, ಭಗವದ್ಗೀತೆ ಹಾಗೂ ಅವುಗಳನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದವ್ಯಾಸರು ದೇಶದ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು ಸಂಸತ್ತು ಕಾನೂನು ಜಾರಿಗೆ ತಂದು ಅವರಿಗೆ ರಾಷ್ಟ್ರೀಯ ಗೌರವ ಸಲ್ಲಿಸಬೇಕು ಎಂದಿದ್ದರು. ಪ್ರಕರಣದಲ್ಲಿ ಜಾಮೀನು ನೀಡುವಾಗ ರಾಮ ಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪನ್ನು ಉಲ್ಲೇಖಿಸಿದ್ದ ಅವರು ಈ ತೀರ್ಪು ರಾಮನನ್ನು ನಂಬುವವರ ಪರವಾಗಿದೆ ಎಂದಿದ್ದರು.
"ರಾಮ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ನೆಲೆಸಿದ್ದಾನೆ, ಅವನು ಭಾರತದ ಆತ್ಮ. ರಾಮನಿಲ್ಲದೆ ಈ ದೇಶದ ಸಂಸ್ಕೃತಿ ಅಪೂರ್ಣ" ಎಂದು ಅವರು ಬಣ್ಣಿಸಿದ್ದರು.
ಅಲ್ಲದೆ ರಾಮ ಕೃಷ್ಣರ ಕುರಿತು ದೇಶದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯ ವಿಷಯ ಇರಬೇಕು. ಏಕೆಂದರೆ ಶಿಕ್ಷಣದಿಂದ ಮಾತ್ರ ವ್ಯಕ್ತಿ ಸುಸಂಸ್ಕೃತನಾಗುತ್ತಾನೆ ಜಾಗೃತನಾಗುತ್ತಾನೆ ಅವನಲ್ಲಿ ಜೀವನ ಮೌಲ್ಯ ಸಂಸ್ಕೃತಿ ಬೆಳೆಯುತ್ತದೆ ಎಂದಿದ್ದರು.
ಅದಕ್ಕೂ ಒಂದು ತಿಂಗಳು ಮುನ್ನ ಅಂದರೆ ಸೆಪ್ಟೆಂಬರ್ 2021 ರಲ್ಲಿ, ಸರ್ಕಾರವು ಸಂವಿಧಾನದ ಭಾಗ IIIರ ಅಡಿಯಲ್ಲಿ ಗೋವನ್ನು ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ತರುವ ಕಾಯಿದೆ ಜಾರಿಗೊಳಿಸಬೇಕು. ಗೋವುಗಳಿಗೆ ಹಾನಿ ಮಾಡುವ ಬಗ್ಗೆ ಮಾತನಾಡುವವರನ್ನು ಶಿಕ್ಷಿಸಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಗೋಹತ್ಯೆ ತಡೆ ಕಾಯಿದೆಯಡಿ ಆರೋಪಿಗೆ ಜಾಮೀನು ನಿರಾಕರಿಸಿದ್ದ ಅವರು, ಗೋವು ಭಾರತದ ಸಂಸ್ಕೃತಿಯ ಭಾಗವಾಗಿದ್ದು ಅದನ್ನು ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದಿದ್ದರು.
ಗೋ ಸಂರಕ್ಷಣೆಯ ಕೆಲಸ ಕೇವಲ ಧಾರ್ಮಿಕ ವಲಯಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಗೋವು ದೇಶದ ಸಂಸ್ಕೃತಿಯಾಗಿದೆ. ಸಂಸ್ಕೃತಿಯನ್ನು ಉಳಿಸುವ ಕೆಲಸವು ಧರ್ಮಾತೀತವಾಗಿ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಗೋವನ್ನು ಪೂಜಿಸಿದರೆ ಮಾತ್ರ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದಿದ್ದರು.
ಅದೇ ಆದೇಶದಲ್ಲಿ ಅವರು ಹಸು ಆಮ್ಲಜನಕವನ್ನೇ ಸೇವಿಸಿ ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಎಂದು ವಿಜ್ಞಾನಿಗಳು ನಂಬುತ್ತಾರೆ ಎಂದಿದ್ದರು.
ಜುಲೈ 2021 ರಲ್ಲಿ , ಮಹಿಳೆಯನ್ನು ಕಾನೂನುಬಾಹಿರವಾಗಿ ಇಸ್ಲಾಂಗೆ ಪರಿವರ್ತಿಸಿದ ಆರೋಪ ಹೊತ್ತಿದ್ದ ವ್ಯಕ್ತಿಗೆ ಜಾಮೀನು ನಿರಾಕರಿಸುವಾಗ, ನ್ಯಾಯಮೂರ್ತಿ ಯಾದವ್ ಅವರು ದೇಶದಲ್ಲಿ ಧಾರ್ಮಿಕ ಮತಾಂಧತೆ, ದುರಾಸೆ ಅಥವಾ ಭಯಕ್ಕೆ ಅವಕಾಶವಿಲ್ಲ. ಬಹುಸಂಖ್ಯಾತ ಸಮುದಾಯದ ವ್ಯಕ್ತಿ ಅವಮಾನಿತನಾಗಿ ಮತಾಂತರಗೊಂಡರೆ ಆಗ ದೇಶ ದುರ್ಬಲವಾಗುತ್ತದೆ, ವಿಧ್ವಂಸಕ ಶಕ್ತಿಗಳಿಗೆ ಅನುಕೂಲಕರವಾಗುತ್ತದೆ ಎಂದಿದ್ದರು.
ನ್ಯಾಯಮೂರ್ತಿಗಳು ಭಾನುವಾರ ವಿಎಚ್ಪಿ ಕಾನೂನು ಘಟಕದ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿವೆ. ನ್ಯಾಯಾಂಗ ನಿಷ್ಪಕ್ಷಪಾತತೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ನ್ಯಾಯಮೂರ್ತಿಗಳು ಪಾಲಿಸುತ್ತಿದ್ದಾರೆಯೇ ಎಂಬ ಬಗ್ಗೆ ಹಲವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲೆ ರೆಬೆಕಾ ಜಾನ್ ಅವರು “ನ್ಯಾಯಮೂರ್ತಿಗಳು ತಾವು ಸ್ವೀಕರಿಸಿದ ಪ್ರಮಾಣವಚನಕ್ಕೆ ವ್ಯತಿರಿಕ್ತವಾಗಿ ಭಾಷಣ ಮಾಡುತ್ತಿರುವುದು ಕೆಲ ಕಾಲದಿಂದ ನಡೆಯುತ್ತಿದೆ... ನನ್ನ ವಕೀಲಿ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಅಧಿವಕ್ತ ಪರಿಷತ್ನಂತಹ (ಆರ್ಎಸ್ಎಸ್ನ ಕಾನೂನು ವಿಭಾಗ) ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ಇರಲಿಲ್ಲ. ಇಂದು ಅವು ಆಯೋಜಿಸುವ ಕಾರ್ಯಕ್ರಮಗಳಿಗೆ ನ್ಯಾಯಮೂರ್ತಿಗಳನ್ನು ಆಹ್ವಾನಿಸುತ್ತಿದ್ದು ಅವರು ಉದ್ದೇಶಪೂರ್ವಕವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ದ್ವೇಷ ಭಾಷಣದಂತಹ ಹೇಳಿಕೆಗಳನ್ನು ನೀಡಿದ್ದಾರೆ. ಅವರು ತಾವು ಮಾಡಿದ್ದ ಪ್ರತಿಜ್ಞೆಯ ಪ್ರತಿಯೊಂದು ಸಾಲನ್ನೂ ಉಲ್ಲಂಘಿಸಿದ್ದಾರೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಆದ್ಯತೆಯ ಮೇರೆಗೆ ಅವರ ಹೆಸರನ್ನು ಶಿಫಾರಸು ಮಾಡಿದ್ದು ಹೇಗೆ ಹಾಗೂ ಅವರ ಹೇಳಿಕೆಗಳನ್ನು ಎದುರಿಸಲು ಅದು ಹೇಗೆ ಯೋಜಿಸುತ್ತಿದೆ ಎಂಬ ಸ್ಪಷ್ಟ ಪ್ರಶ್ನೆಯನ್ನು ಇದು ಎತ್ತಿದೆ. ಅವರ ಭಾಷಣ ಸಂವಿಧಾನದ ಮೇಲಿನ ಆಕ್ರಮಣವಾಗಿದ್ದು ದೋಷಾರೋಪ ಮಾಡುವಂತಹ ಅಪರಾಧವಾಗಿದೆ” ಎಂದಿದ್ದಾರೆ
"ಆದರೆ, ಏನೂ ಆಗುವುದಿಲ್ಲ. ಹೀಗಾಗಿಯೇ ಇದು ಅತೀವ ವಿಚಲಿತಗೊಳಿಸುವಂಥದ್ದಾಗಿದೆ. ತುಂಬಾ ಗೊಂದಲಗೊಳಿಸುತ್ತದೆ. ಸಾಂವಿಧಾನಿಕ ಜಾತ್ಯತೀತ ಗಣರಾಜ್ಯವು ಅಸ್ತಿತ್ವದಲ್ಲಿಲ್ಲ. ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿಲ್ಲ..” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.