ramesh sogemane
ramesh sogemane
ಸುದ್ದಿಗಳು

ಗಲ್ಲು ಶಿಕ್ಷೆ ವಿಧಿಸುವ ಮುನ್ನ ನ್ಯಾಯಾಲಯಗಳು ಹೇಗೆ ಸಮಗ್ರ ವಿಶ್ಲೇಷಣೆ ನಡೆಸಬಹುದು ಎಂದು ಅರಿಯಲು ಮುಂದಾದ ಸುಪ್ರೀಂ

Bar & Bench

ಮಹತ್ವದ ಬೆಳವಣಿಗೆಯೊಂದರಲ್ಲಿ ಮರಣದಂಡನೆ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಗಳು ಗಲ್ಲುಶಿಕ್ಷೆ ವಿಧಿಸಬೇಕೆ ಅಥವಾ ಬೇಡವೇ ಎಂಬ ಸಂದರ್ಭಗಳಲ್ಲಿ ವಿಶೇಷವಾಗಿ ಶಿಕ್ಷೆ ಕಡಿತಗೊಳಿಸುವಾಗ ಆರೋಪಿಗಳು ಮತ್ತು ಅಪರಾಧದ ಬಗ್ಗೆ ಸಮಗ್ರ ವಿಶ್ಲೇಷಣೆ ಹೇಗೆ ಪಡೆಯಬಹುದು ಎಂಬುದನ್ನು ಅರಿಯಲು ಸುಪ್ರೀಂ ಕೋರ್ಟ್‌ ಪ್ರಕರಣವೊಂದನ್ನು ದಾಖಲಿಸಿದೆ [ಇರ್ಫಾನ್ @ ಭಯು ಮೇವತಿ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಪ್ರಸ್ತುತ ತನಿಖೆ ನಡೆಸುವ ಪ್ರೊಬೆಷನ್‌ ಅಧಿಕಾರಿ ಈ ಕೆಲಸ ಮಾಡುತ್ತಿದ್ದು ಅನೇಕ ಬಾರಿ ಅವರ ವಿಶ್ಲೇಷಣೆ ಮತ್ತು ವರದಿ ಆರೋಪಿಯ ಸಂಪೂರ್ಣ ವಿವರ ಪರಿಗಣಿಸುವುದಿಲ್ಲ ಮತ್ತು ವಿಚಾರಣೆಯ ಕೊನೆಯ ಹಂತದಲ್ಲಿ ನಡೆಸಿದ ಸಂದರ್ಶನಗಳನ್ನು ಇವು ಅವಲಂಬಿಸಿರುತ್ತವೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರಿದ್ದ ಪೀಠ ತಿಳಿಸಿದೆ.

ಆದ್ದರಿಂದ ತನಿಖೆ ನಡೆಸುವ ಪ್ರೊಬೆಷನ್‌ ಅಧಿಕಾರಿಯನ್ನು ಬಿಟ್ಟು ವಿಚಾರಣೆಯ ಆರಂಭದಲ್ಲಿಯೇ ಆರೋಪಿಯನ್ನು ಸಂದರ್ಶಿಸವ ಸೌಲಭ್ಯವನ್ನು ಡಿಫೆನ್ಸ್‌ ವಿಭಾಗದ ಯಾರಿಗಾದರೂ ನೀಡಿದರೆ ಮರಣದಂಡನೆ ವಿಧಿಸಬೇಕೆ ಅಥವಾ ಬೇಡವೇ ಎಂಬ ಕುರಿತು ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಹಂತದಲ್ಲಿ ಸಮಗ್ರ ವಿಶ್ಲೇಷಣೆ ನಡೆಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಅಂಶಗಳನ್ನು ಪರಿಗಣಿಸುವ ಉದ್ದೇಶದಿಂದ ನ್ಯಾಯಾಲಯ ಮರಣ ದಂಡನೆ ವಿರೋಧಿ ಸಂಸ್ಥೆಯಾದ ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ʼಪ್ರಾಜೆಕ್ಟ್‌ 39ಎʼ ಸಲ್ಲಿಸಿದ್ದ ಅರ್ಜಿಯನ್ನು ಪ್ರತ್ಯೇಕ ರಿಟ್ ಅರ್ಜಿಯಾಗಿ ಪರಿವರ್ತಿಸಿದೆ.

ಈ ಸಂಬಂಧ ಅದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ನಲ್ಸಾ) ಸದಸ್ಯ ಕಾರ್ಯದರ್ಶಿಗೂ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ಹಿರಿಯ ವಕೀಲ ಸಿದ್ಧಾರ್ಥ ದವೆ ಅವರನ್ನು ನೇಮಿಸಿರುವ ಪೀಠ ದವೆ ಅವರಿಗೆ ಸಹಾಯ ಮಾಡುವಂತೆ ವಕೀಲ ಕೆ ಪರಮೇಶ್ವರ್ ಅವರಿಗೆ ಸೂಚಿಸಿದೆ.

ವಿಚಾರಣಾ ನ್ಯಾಯಾಲಯವೊಂದು ತನಗೆ ಮರಣದಂಡನೆ ವಿಧಿಸಿದ್ದನ್ನು ಮತ್ತು ಮಧ್ಯಪ್ರದೇಶ ಹೈಕೋರ್ಟ್ ಅದನ್ನು ದೃಢಪಡಿಸಿದ್ದನ್ನು ಪ್ರಶ್ನಿಸಿ ಇರ್ಫಾನ್ ಅಲಿಯಾಸ್‌ ಭಯು ಮೇವಾಟಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪ್ರಕರಣದಲ್ಲಿ ಅರ್ಜಿ ಸಲ್ಲಿಸಿರುವ ʼಪ್ರಾಜೆಕ್ಟ್‌ 39ಎʼ ಮೇಲ್ಮನವಿದಾರನನ್ನು ಜೈಲಿನಲ್ಲಿ ಭೇಟಿಯಾಗಿ ಆತನ ಶಿಕ್ಷೆಗೆ ಸಂಬಂಧಿಸಿದಂತೆ ವಾದ ಮಂಡಿಸಲು ಮಾಹಿತಿ ಸಂಗ್ರಹಿಸುವುದಕ್ಕಾಗಿ ಮಿಟಿಗೇಷನ್‌ ತನಿಖಾಧಿಕಾರಿ ಆತನ ಸಂದರ್ಶನ ನಡೆಸಲು ಅನುಮತಿ ನೀಡಬೇಕು ಎಂದು ಕೋರಿತ್ತು.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ʼಪ್ರಾಜೆಕ್ಟ್‌ 39ಎʼ ಪರ ಮಿಟಿಗೇಷನ್‌ ಅಧಿಕಾರಿಗೆ (ಶಮನಾಧಿಕಾರಿ) ಉಜ್ಜಯಿನಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಇರ್ಫಾನ್‌ ಜೊತೆ ಗೌಪ್ಯ ಸಂದರ್ಶನ ನಡೆಸಲು ಅನುಮತಿ ನೀಡಿದೆ. ಗೌಪ್ಯತೆಯ ದೃಷ್ಟಿಯಿಂದ ಈ ಸಂದರ್ಶನವನ್ನು ಯಾವುದೇ ಜೈಲು ಸಿಬ್ಬಂದಿ/ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರತ್ಯೇಕ ಸ್ಥಳದಲ್ಲಿ ನಡೆಸಬೇಕು ಎಂದು ಸೂಚಿಸಿದೆ.

ಅರ್ಜಿದಾರನ ಸಂದರ್ಶನದ ಆಡಿಯೊ ರೆಕಾರ್ಡ್‌ ಮಾಡಬಹುದು ಇಲ್ಲವೇ ಮಿಟಿಗೇಷನ್‌ ಅಧಿಕಾರಿ ಸೂಚಿಸಿದ ವ್ಯಕ್ತಿಯೊಬ್ಬ ಸಂದರ್ಶನದ ವಿವರಗಳನ್ನು ಬರೆದುಕೊಳ್ಳಬಹುದು ಎಂದಿರುವ ನ್ಯಾಯಾಲಯ ಮಿಟಿಗೇಷನ್‌ ಅಧಿಕಾರಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸುವಂತೆ ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿತು.

[ಆದೇಶವನ್ನು ಇಲ್ಲಿ ಓದಿ]

Irfan_Bhati_Mevati_vs_State_of_Madhya_Pradesh (1).pdf
Preview