Chitra Ramkrishna and Rouse Avenue Courts
Chitra Ramkrishna and Rouse Avenue Courts  
ಸುದ್ದಿಗಳು

ಎನ್ಎಸ್ಇ ಕೋ- ಲೊಕೇಷನ್ ಹಗರಣ: ಚಿತ್ರಾ, ಆನಂದ್ ಸುಬ್ರಮಣಿಯಂ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

Bar & Bench

ವಿವಾದಿತ ಕೋ ಲೊಕೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್‌ಎಸ್‌ಇ) ಮಾಜಿ ಉದ್ಯೋಗಿ ಆನಂದ್‌ ಸುಬ್ರಮಣಿಯಮ್ ಅವರ ಹುದ್ದೆ ಮತ್ತು ವೇತನವನ್ನು ಆಗಿಂದಾಗ್ಗೆ ಪರಿಷ್ಕರಿಸಿರುವುದು ಪ್ರಕರಣದ ಪ್ರಧಾನ ಆರೋಪಿಯಾದ ಚಿತ್ರಾ ರಾಮಕೃಷ್ಣ ಅವರ ವೈಯಕ್ತಿಕ ನಿರ್ಧಾರವಾಗಿರಲಿಲ್ಲ ಎಂದು ಚಿತ್ರಾ ಪರ ವಕೀಲರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ [ಸಿಬಿಐ ಮತ್ತು ಸಂಜಯ್ ಗುಪ್ತಾ ಇನ್ನಿತರರ ನಡುವಣ ಪ್ರಕರಣ].

ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿರುವ ಚಿತ್ರಾ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅವರು ಈ ಅಂಶ ತಿಳಿಸಿದ್ದಾರೆ. “ಈ ನಿರ್ಧಾರ ಎನ್‌ಎಸ್‌ಇ ಮಂಡಳಿಯ ಸಾಮೂಹಿಕ ನಿರ್ಧಾರವಾಗಿತ್ತು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಕೂಡ ಅದರ ಭಾಗವಾಗಿದ್ದರು” ಎಂದು ಅವರು ತಿಳಿಸಿದ್ದಾರೆ.

ಮುಖ್ಯ ಕಾರ್ಯತಂತ್ರ ಸಲಹೆಗಾರರಾಗಿ (ಸಿಎಸ್‌ಎ) ನೇಮಕವಾಗಿದ್ದ ಆನಂದ್‌ ಅವರನ್ನು ಚಿತ್ರಾ ಅವರ ಅವರ ಅಧಿಕಾರಾವಧಿಯಲ್ಲಿ ಸಮೂಹ ಕೆಲಸ ನಿರ್ವಹಣಾ ಅಧಿಕಾರಿ (ಜಿಒಒ) ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಲಹೆಗಾರ ಹುದ್ದೆಗೆ ಮರುನೇಮಕ ಮಾಡಲಾಗಿತ್ತು.

ಮಂಡಳಿಯಲ್ಲಿ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಗುತ್ತಿತ್ತು ಎಂಬ ಅಂಶಗಳನ್ನು ಚಿತ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್‌ ಹರಿಹರನ್‌ ಅವರು ವಿಶೇಷ ಸಿಬಿಐ ನ್ಯಾಯಾಧೀಶ ಸಂಜೀವ್‌ ಅಗರ್‌ವಾಲ್‌ ಅವರ ಗಮನಕ್ಕೆ ತಂದರು.

ಇದೇ ವೇಳೆ ನ್ಯಾಯಾಲಯ ಚಿತ್ರಾ ಅವರ ವೈದ್ಯಕೀಯ ವರದಿಯನ್ನು ದಾಖಲಿಸಿಕೊಂಡು ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು. ಮೇ 9ರಂದು ಆದೇಶ ಹೊರಬೀಳುವ ನಿರೀಕ್ಷೆಯಿದೆ.

ಹಿಮಾಲಯದ ಯೋಗಿಯೊಬ್ಬರ ಸಲಹೆಯೆಯಂತೆ ತಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ತನಿಖೆಯ ಆರಂಭದಲ್ಲಿ ಚಿತ್ರಾ ಅವರು ಹೇಳಿಕೊಂಡಿದ್ದರು. ಎನ್‌ಎಸ್‌ಇಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಸಹ ಆರೋಪಿಗಳು ಮತ್ತಿತರರಿಗೆ ಸೋರಿಕೆ ಮಾಡಿದ ಆರೋಪ ಚಿತ್ರಾ ಅವರ ಮೇಲಿದೆ.