ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಹೈಕೋರ್ಟ್‌; ತನಿಖಾ ವರದಿ ಸಲ್ಲಿಕೆಗೆ ಮೂರು ತಿಂಗಳ ಗಡುವು

ಬೆಂಗಳೂರು ಸಿಬಿಐನ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ್‌ ವರ್ಮಾ ನೇತೃತ್ವದ ಎಸ್‌ಐಟಿಯಲ್ಲಿ ಕರ್ನಾಟಕದ ಐಪಿಎಸ್‌ಗಳಾದ ಹೋಮ್‌ ಗಾರ್ಡ್‌ನ ಅಕ್ಷಯ್‌ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ನಿಶಾ ಜೇಮ್ಸ್‌ ಸದಸ್ಯರಾಗಿದ್ದಾರೆ.
ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಹೈಕೋರ್ಟ್‌; ತನಿಖಾ ವರದಿ ಸಲ್ಲಿಕೆಗೆ ಮೂರು ತಿಂಗಳ ಗಡುವು
Published on

ಭೋವಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ತನಿಖೆಯ ನೆಪದಲ್ಲಿ ಸಿಐಡಿ ಪೊಲೀಸರು ನೀಡಿದ ಕಿರುಕುಳದಿಂದ ಮನನೊಂದು ವಕೀಲೆ ಎಸ್‌ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ಮೂವರು ಐಪಿಎಸ್‌ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಗಡುವು ವಿಧಿಸಿದೆ.

ಜೀವಾ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಾಗೂ ತಮ್ಮ ವಿರುದ್ಧ ಬನಶಂಕರಿ ಠಾಣೆಯಲ್ಲಿ ದಾಖಲಾಗಿರುವ ಬಿಎನ್‌ಎಸ್‌ ಸೆಕ್ಷನ್‌ 108 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 17(ಎ) ಅಡಿ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಡಿವೈಎಸ್‌ಪಿ ಬಿ ಎಂ ಕನಕಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice M Nagaprasanna
Justice M Nagaprasanna

“ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರು ಸಿಬಿಐನ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ್‌ ವರ್ಮಾ ನೇತೃತ್ವದ ಮೂರು ಅಧಿಕಾರಿಗಳ ವಿಶೇಷ ತನಿಖಾ ತಂಡ ನಡೆಸಲಿದೆ. ಕರ್ನಾಟಕ ಹೋಮ್‌ ಗಾರ್ಡ್‌ನ ಪೊಲೀಸ್‌ ವರಿಷ್ಠಾಧಿಕಾರಿಯಾಗಿರುವ ಅಕ್ಷಯ್‌ ಮಚೀಂದ್ರ ಹಾಕೆ, ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಅವರು ಎಸ್‌ಐಟಿಯ ಇನ್ನಿಬ್ಬರು ಸದಸ್ಯರಾಗಿರಲಿದ್ದಾರೆ” ಎಂದು ನ್ಯಾಯಾಲಯ ಆದೇಶಿಸಿದೆ.

“ಕನಕಲಕ್ಷ್ಮಿ ಅವರು ಭೋವಿ ಹಗರಣದ ಪ್ರಕರಣದ ಆರೋಪಿಯೊಬ್ಬರಿಂದ 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ದಾಖಲೆಯಿಲ್ಲ. ಬಿಎನ್‌ಎಸ್‌ ಸೆಕ್ಷನ್‌ 108 (ಐಪಿಸಿ ಸೆಕ್ಷನ್‌ 306) ಅಡಿ ಎಸ್‌ಐಟಿ ತನಿಖೆ ಮಾಡುವಾಗ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಗಮನಕ್ಕೆ ಬಂದರೆ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್‌ 17ಎ ಅಡಿ ಕಾನೂನಿನ ಅನ್ವಯ ತನಿಖೆ ನಡೆಸಬೇಕು” ಎಂದೂ ನ್ಯಾಯಾಲಯವು ಆದೇಶಿಸಿದೆ.

“ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ತಕ್ಷಣ ಎಸ್‌ಐಟಿ ಆರಂಭಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿತ ಅಧಿಕಾರಿಗಳು ಎಸ್‌ಐಟಿಗೆ ಒದಗಿಸಬೇಕು. ಅಗತ್ಯಬಿದ್ದರೆ ಇತರೆ ಪೊಲೀಸ್‌ ಅಧಿಕಾರಿಗಳನ್ನು ಎಸ್‌ಐಟಿಯು ನೆರವಿಗೆ ಪಡೆಯಬಹುದು. ತನಿಖೆ ಆರಂಭವಾದಗಿನಿಂದ ಮೂರು ತಿಂಗಳಲ್ಲಿ ತನಿಖೆ ಮುಗಿಯಬೇಕು. ತನಿಖಾ ವರದಿಯನ್ನು ಮೂರು ತಿಂಗಳು ಅಥವಾ ಅದರ ಒಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಎಸ್‌ಐಟಿಗೆ ಅಗತ್ಯವಾದ ಕಚೇರಿ ಮತ್ತಿತರ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Also Read
[ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ] 'ಡಿವೈಎಸ್‌ಪಿ ಕನಕಲಕ್ಷ್ಮಿಯನ್ನು ಏಕೆ ಬಂಧಿಸಿಲ್ಲ?' ಹೈಕೋರ್ಟ್‌ ಕೆಂಡಾಮಂಡಲ

ಎಸ್‌ಐಟಿಯ ನೇತೃತ್ವ ವಹಿಸಲಿರುವ ವಿನಾಯಕ ವರ್ಮಾ ಅವರಿಗೆ ಸಿಬಿಐ ವಕೀಲ ಪಿ ಪ್ರಸನ್ನ ಕುಮಾರ್‌ ಅವರು ಈ ಆದೇಶವನ್ನು ತಲುಪಿಸಬೇಕು. ರಾಜ್ಯದ ಅಧಿಕಾರಿಗಳಿಗೆ ಪ್ರಾಸಿಕ್ಯೂಷನ್‌ ಮಾಹಿತಿ ಒದಗಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಇನ್ನು, ಭೋವಿ ನಿಗಮದ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ಮುಂದುವರಿಯಲಿದೆ. ಅವುಗಳ ವಿಚಾರಣೆಯನ್ನು ಡಿಸೆಂಬರ್‌ 19ಕ್ಕೆ ನಡೆಸಲಾಗುವುದು ಎಂದು ಆದೇಶದಲ್ಲಿ ಹೇಳಿದೆ.

Kannada Bar & Bench
kannada.barandbench.com